ಹೊಸದಿಗಂತ ವರದಿ, ಶಿವಮೊಗ್ಗ:
ನಿರಂತರ ಜ್ಯೋತಿ ಕಾಮಗಾರಿಯಲ್ಲಿ ಲೋಪ ದೋಷ ಎಸಗಿರುವ ಇಬ್ಬರು ಅಧಿಕಾರಿಗಳನ್ನು 24 ಗಂಟೆ ಒಳಗೆ ಅಮಾನತು ಮಾಡಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದರು.
ನಿರಂತರ ಜ್ಯೋತಿ ಕಾಮಗಾರಿ ಪೂರ್ಣ ಆಗುವ ಮೊದಲೇ ಪೂರ್ಣಗೊಂಡ ಬಗ್ಗೆ ಸಹಿ ಹಾಕದೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಒಬ್ಬ ಅಧಿಕಾರಿ ಗುತ್ತಿಗೆದಾರನಿಗೆ ನಿರ್ವಹಣೆ ಪುಸ್ತಕ ನೀಡಿದ್ದಾರೆ. ಇಬ್ಬರನ್ನೂ ತಕ್ಷಣ ಸಸ್ಪೆಂಡ್ ಮಾಡಬೇಕು ಎಂದು ಸೂಚಿಸಿದರು.
ಇನ್ನು ಕಾಮಗಾರಿ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ಈ ಬಗ್ಗೆ ಇಲಾಖೆ ಅಥವಾ ಎಸಿಬಿ ತನಿಖೆ ನಡೆಸಲಾಗುತ್ತದೆ. ಭ್ರಷ್ಟಾಚಾರ ವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಲಾಖೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಸಚಿವ ಈಶ್ಚರಪ್ಪ, ಶಾಸಕರಾದ ಆಯನೂರು ಮಂಜುನಾಥ, ರುದ್ರೇಗೌಡ, ಅಶೋಕ ನಾಯ್ಕ ಹಾಜರಿದ್ದರು.