ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಮತ್ತು ಬಿಜೆಪಿ ನಡುವೆ ಭಿನ್ನಮತ ಹೊಗೆಯಾಡುತ್ತಿರುವುದು ಢಾಳಾಗಿ ಗೋಚರಿಸುತ್ತಿದೆ. ಇತ್ತೀಚೆಗಷ್ಟೆ ಬಿಜೆಪಿಯ ಮುಖ್ಯಸ್ಥರೊಬ್ಬರು ಸಭೆ ನಡೆಸಿ ಜೆಡಿಯುದೊಂದಿಗೆ ಮೈತ್ರಿ ಮುಮದುವರಿಕೆ ಮತ್ತು ಮುಂದಿನ ಚುನಾವಣೆಯನ್ನು ಒಟ್ಟಾಗಿ ಎದುರಿಸುವುದಾಗಿ ಹೇಳಿದ್ದರು. ಆದರೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಿಂದ ದೂರ ಉಳಿದಿರುವ ನಿತೀಶ್ಕುಮಾರ್ ಅವರ ನಿರ್ಧಾರವು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಪ್ರಸ್ತುತ ಬಿಜೆಪೆಯೊಂದಿಗಿನ ಭಿನ್ನಾಭಿಪ್ರಾಯಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು ಜೆಡಿಯು ಮಾಜಿ ಮಿತ್ರಪಕ್ಷ ಆರ್ಜೆಡಿಯೊಂದಿಗೆ ಕೈಜೋಡಿಸಲಿದೆಯೇ ಎಂಬೆಲ್ಲ ಊಹೆಗಳು ಹರಿದಾಡುತ್ತಿವೆ. ಮೂಲಗಳ ಪ್ರಕಾರ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಮುರಿದು ಬೀಳುವ ಹಂತದಲ್ಲಿದೆ. ಹೆಚ್ಚಿನ ಜೆಡಿಯು ಶಾಸಕರು ಮಧ್ಯಂತರ ಚುನಾವಣೆಯಿಂದ ದೂರವಿರುವುದರಿಂದ, ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪಕ್ಷವು ಆರ್ಜೆಡಿ, ಕಾಂಗ್ರೆಸ್ ಮತ್ತು ಎಡರಂಗದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
ಬಿಹಾರದ ರಾಜಕೀಯ ಗೊಂದಲದ ಮಧ್ಯೆ, ನಿತೀಶ್ ಕುಮಾರ್ ಅವರು ಆಗಸ್ಟ್ 9, ಮಂಗಳವಾರ ಪಾಟ್ನಾದಲ್ಲಿ ಎಲ್ಲಾ ಪಕ್ಷದ ಸಂಸದರು ಮತ್ತು ಶಾಸಕರ ಸಭೆಯನ್ನು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ನಡೆಯಲಿರುವ ಪ್ರಮುಖ ಸಭೆಗಾಗಿ ಆರ್ಜೆಡಿ ಸಂಸದರು ಮತ್ತು ಶಾಸಕರನ್ನು ಪಾಟ್ನಾದಲ್ಲಿ ಸೇರುವಂತೆ ತಿಳಿಸಲಾಗಿದೆ. ಮುಂಗಾರು ಅಧಿವೇಶನಕ್ಕಾಗಿ ದೆಹಲಿಯಲ್ಲಿರುವ ಸಂಸತ್ ಸದಸ್ಯರು ಇಂದು ಸಂಜೆಯೊಳಗೆ ಪಾಟ್ನಾಗೆ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.