ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಮುಖ್ಯಮಂತ್ರಿ ಒಂದು ವಾರ ರಜೆ ತೆಗೆದುಕೊಂಡು ಧ್ಯಾನ ಮಾಡಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್, ನಿತೀಶ್ ಕುಮಾರ್ ಕಾಲೆಳೆದರು. ಮದ್ಯ ನಿಷೇಧ ಜಾರಿಯಲ್ಲಿರುವ ಬಿಹಾರದ ಛಪ್ರಾ ಪ್ರದೇಶದಲ್ಲಿ ಕಲಬೆರಕೆ ಮದ್ಯ ಸೇವಿಸಿ 50ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗಷ್ಟೇ “ಮದ್ಯ ಸೇವಿಸಿದವರು ಸಾಯುತ್ತಾರೆ” ಎಂಬ ಹೇಳಿಕೆ ಕೂಡ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಗಿರಿರಾಜ್ ಸಿಂಗ್… ”ಕಲಬೆರಕೆ ಮದ್ಯದಿಂದ ಈಗಾಗಲೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಹೊಣೆಯಲ್ಲದೆ ಮತ್ಯಾರು? ಸರಿಯಾದ ಕಾನೂನು ಜಾರಿ ಮಾಡದ ಕಾರಣ ಯಾರಿಗೂ ಭಯವಿಲ್ಲದಂತಾಗಿದೆ. ನಿತೀಶ್ ಕುಮಾರ್ ಟೀಕೆಗಳನ್ನು ಸಹ ಒಪ್ಪಿಕೊಳ್ಳಬೇಕು, ಬಿಹಾರ ವಿಧಾನಸಭೆಯಲ್ಲಿ ಅನಗತ್ಯವಾಗಿ ಕೂಗಾಡುವ ಅಗತ್ಯವಿಲ್ಲ ಎಂದರು.
ಹೀಗಾಗಿ ನಿತೀಶ್ ಕುಮಾರ್ ಒಂದು ವಾರ ರಜೆ ತೆಗದುಕೊಂಡು ಧ್ಯಾನ ಮಾಡಬೇಕು ಎಂದು ವ್ಯಂಗ್ಯವಾಡಿದರು. ಮದ್ಯ ನಿಷೇಧವನ್ನು ಹೇಗೆ ಜಾರಿಗೆ ತರಬೇಕು ಎಂಬ ಬಗ್ಗೆ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಬೇಕು. ಮದ್ಯ ನಿಷೇಧವನ್ನು ಸರಿಯಾಗಿ ಜಾರಿಗೊಳಿಸದ ಕಾರಣ ಜನರು ಸಾಯುತ್ತಿದ್ದಾರೆ ಮತ್ತು ಅನೇಕರು ಅಪರಾಧಿಗಳಾಗಿ ಬದಲಾಗುತ್ತಿದ್ದಾರೆ ಎಂದು ಟೀಕೆ ಮಾಡಿದರು.