ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಂಭಮೇಳದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಮತ್ತು ಅವರ ಪತಿ ಫರ್ಮಾನ್ ಖಾನ್ಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಕೇರಳ ಹೈಕೋರ್ಟ್ ಹಿಂತೆಗೆದುಕೊಂಡಿದೆ. ದಂಪತಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.
ಮೊನಾಲಿಸಾ ಮತ್ತು ಅವರ ಪತಿಯನ್ನು ನೀಡಿದ್ದ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಈ ಕಾರಣದಿಂದ ಮಧ್ಯಂತರ ಭದ್ರತಾ ಆದೇಶವನ್ನು ರದ್ದುಪಡಿಸಲಾಯಿತು.
ಅಗತ್ಯವಿದ್ದರೆ ಮಾತ್ರ ರಕ್ಷಣೆ
ಮುಂದಿನ ದಿನಗಳಲ್ಲಿ ಮೊನಾಲಿಸಾ ಸ್ವತಃ ಲಿಖಿತವಾಗಿ ಪೊಲೀಸ್ ರಕ್ಷಣೆ ಕೋರಿದರೆ, ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ವಕೀಲರಿಗೂ ಮಾಹಿತಿ ಇರಲಿಲ್ಲ
ವಿಚಾರಣೆ ವೇಳೆ ಮೊನಾಲಿಸಾ ಪರ ವಕೀಲರು ಸಹ ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ಅಥವಾ ಸಂಪರ್ಕ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ನಿಗದಿಪಡಿಸಲಾಗಿದೆ.



