ನಮ್ಮ ದೇಶಕ್ಕೆ ಯಾವುದೇ ಹಾನಿ ಉಂಟಾಗಬಾರದು: ಪ್ರತಿಭಟನಾ ರ‍್ಯಾಲಿ ಕೈ ಬಿಟ್ಟ ಇಮ್ರಾನ್ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಮ್ಮ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ರ‍್ಯಾಲಿಯನ್ನು ಕೈಬಿಡುವ ಮಹತ್ವದ ಘೋಷಣೆ ಮಾಡಿದ್ದಾರೆ.

ತಮ್ಮ ಪಕ್ಷದ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋನಲ್ಲಿ ಅವರು ಮಾತನಾಡಿದ್ದು, ಈ ಸರ್ಕಾರದ ಭಾಗವಾಗಲು ನಮಗೆ ಇಷ್ಟವಿಲ್ಲ. ನಾನು ಎಲ್ಲ ಮುಖ್ಯಮಂತ್ರಿಗಳು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಸಂಪರ್ಕಿಸುತ್ತೇನೆ. ಎಲ್ಲ ವಿಧಾನಸಭೆಗಳಿಂದ ನಾವು ಹೊರಬರುತ್ತಿದ್ದೇವೆ. ನಮ್ಮದೇ ದೇಶವನ್ನು ನಾವು ಹಿಂಸಾಚಾರ, ಅಸ್ಥಿರತೆಗೆ ದೂಡುವ ಬದಲು ಈ ಭ್ರಷ್ಟ ಸರ್ಕಾರದಿಂದ ಹೊರಬರುವುದು ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.

ಈ ಮೂಲಕ ಪಾಕಿಸ್ತಾನದ ಸಂಸತ್ತು ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿರುವ ತಮ್ಮ ಪಕ್ಷದ ಎಲ್ಲ ಸದಸ್ಯರಿಗೂ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಇಮ್ರಾನ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಸ್ವತಃ ಇಮ್ರಾನ್ ಖಾನ್‌ಗೂ ಗಾಯಗಳಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಇಮ್ರಾನ್ ಖಾನ್ ಚೇತರಿಸಿಕೊಂಡಿದ್ದರು.

ಪಾಕಿಸ್ತಾನದ ಮುಖ್ಯ ನಗರ ರಾವಲ್‌ಪಿಂಡಿಯಲ್ಲಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್‌ರೀಕ್-ಎ-ಇನ್‌ಸಾಫ್ (PTI Party) ಆಯೋಜಿಸಿದ್ದ ಪ್ರತಿಭಟನೆಯು ದೊಡ್ಡಪ್ರಮಾಣದಲ್ಲಿ ಜನರು ಸೇರಿದ್ದರು. ಆದರೆ ಇಸ್ಲಾಮಾಬಾದ್‌ವರೆಗೆ ನಡೆಸಲು ಉದ್ದೇಶಿಸಿದ್ದ ರ‍್ಯಾಲಿಯನ್ನು ಅರ್ಧದಲ್ಲೇ ಕೈಬಿಡಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಶ್ರೀಲಂಕಾದಂಥ ಪರಿಸ್ಥಿತಿಯನ್ನು ನಾವು ಇಲ್ಲಿಯೂ ನಿರ್ಮಿಸಬಹುದಿತ್ತು. ಆದರೆ ದೇಶದಲ್ಲಿ ಅರಾಜಕತೆ ಉಂಟಾಗಬಾರದು ಎನ್ನುವ ಕಾರಣಕ್ಕೆ ನಾವು ಇಸ್ಲಾಮಾಬಾದ್‌ವರೆಗಿನ ಪಾದಯಾತ್ರೆಯನ್ನು ಮುಂದೂಡಿದ್ದೇವೆ. ನಮ್ಮ ದೇಶಕ್ಕೆ ಯಾವುದೇ ಹಾನಿ ಉಂಟಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!