ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರೀಯ ಸಂಸ್ಥೆಗಳು ಸಂಸತ್ತಿನ ಸದಸ್ಯರನ್ನು ಕರೆಸಿ ಬಂಧಿಸುವ ಸಂದರ್ಭಗಳು ಸಾಮಾನ್ಯ ವ್ಯಕ್ತಿಗಿಂತ ಭಿನ್ನವಾಗಿಲ್ಲ ಮತ್ತು ಅಪರಾಧ ಪ್ರಕರಣಗಳಲ್ಲಿ ಅವರಿಗೆ ಯಾವುದೇ ವಿನಾಯಿತಿ ಇಲ್ಲ ಎಂದು ರಾಜ್ಯಸಭಾ ಸ್ಪೀಕರ್ ಹಾಘೂ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ.
“ಸಂಸತ್ತಿನ ಸದಸ್ಯರು ಕೆಲವು ಸವಲತ್ತುಗಳನ್ನು ಅನುಭವಿಸುತ್ತಾರೆ. ಆದ್ದರಿಂದ ಅವರು ತಮ್ಮ ಸಂಸದೀಯ ಕರ್ತವ್ಯಗಳನ್ನು ಅಡೆತಡೆಯಿಲ್ಲದೆ ನಿರ್ವಹಿಸಬಹುದು. ಆದರೆ ಕ್ರಿಮಿನಲ್ ವಿಷಯಗಳಲ್ಲಿ, ಸಂಸತ್ತಿನ ಸದಸ್ಯರು ಸಾಮಾನ್ಯ ನಾಗರಿಕರಿಗಿಂತ ಭಿನ್ನವಲ್ಲ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ತಿನಲ್ಲಿರುವಾಗಲೇ ಇಡಿ ಕರೆ ಬಂದಿದ್ದರಿಂದ ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ತಕ್ಷಣವೇ ಕರೆಸಬಹುದೇ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಒಂದು ದಿನದ ನಂತರ ಉತ್ತರ ನೀಡಿದ ಸಭಾಧ್ಯಕ್ಷರು ಸಂಸತ್ತಿನ ಸವಲತ್ತುಗಳನ್ನು ಉಲ್ಲೇಖಿಸಿ “ಅಧಿವೇಶನ ಪ್ರಾರಂಭವಾಗುವ 40 ದಿನಗಳ ಮೊದಲು ಮತ್ತು ನಂತರ ಸಿವಿಲ್ ಪ್ರಕರಣದಲ್ಲಿ ಬಂಧಿಸಲಾಗುವುದಿಲ್ಲ ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ, ಸದಸ್ಯರಿಗೆ ವಿನಾಯಿತಿ ನೀಡಲಾಗುವುದಿಲ್ಲ. ಸಂಸದರಾಗಿ ಹಾಗೂ ಶಾಸಕರಾಗಿ, ಕಾನೂನು ಮತ್ತು ಕಾನೂನು ಕಾರ್ಯವಿಧಾನಗಳನ್ನು ಗೌರವಿಸುವುದು ನಮ್ಮ ಬದ್ಧ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.