ಹೊಸದಿಗಂತ ವರದಿ, ವಿಜಯಪುರ:
ಪಾಕಿಸ್ಥಾನ ಪರ ಘೋಷಣೆ ಕೂಗಿದರೂ ಯಾವ ಮುಸ್ಲಿಂ ನಾಯಕರು ಖಂಡಿಸಲಿಲ್ಲ. ಈ ಮೂಲಕ ಅವರು ಸಿದ್ದರಾಮಯ್ಯ ಅವರ ಮರ್ಯಾದೆ ತೆಗೆದಿದ್ದಾರೆ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರ ತುಷ್ಠೀಕರಣ ಬಿಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಾಕಿಸ್ಥಾನ ಪರ ಘೋಷಣೆ ವಿಚಾರ ಕುರಿತು ನಗರದಲ್ಲಿ ಹರಿಹಾಯ್ದ ಅವರು, ನಾಸೀರ ಹುಸೇನ್ ಜಿಂದಾಬಾದ್ ಎಂದರೆ ನಮ್ಮ ತಕರಾರಿಲ್ಲ. ಆದರೆ, ಪಾಕಿಸ್ಥಾನ ಪರ ಘೋಷಣೆ ಹಾಕಿರುವುದನ್ನು ಎಲ್ಲ ಮಾಧ್ಯಮದವರು ಪ್ರಸಾರ ಮಾಡಿದ್ದರು. ಅದನ್ನು ಸರ್ಕಾರ ನಂಬಲಿಲ್ಲ. ಈ ಪ್ರಕರಣವನ್ನು ಜಮೀರ್ ಅಹ್ಮದ್, ಸಿ.ಎಂ.ಇಬ್ರಾಹಿಂ ಅಗಲಿ ಯಾವೊಬ್ಬ ಮುಸ್ಲಿಂ ನಾಯಕರು, ಸಚಿವರು ಖಂಡಿಸಲಿಲ್ಲ ಎಂದು ದೂರಿದರು.
ಮುಸ್ಲಿಮರ ತುಷ್ಠೀಕರಣ ಅತೀಯಾಗಿದೆ. ಹಿಂದುಳಿದ ಮತ್ತು ಇತರ ವರ್ಗಗಳಲ್ಲಿರುವ ಬಡವರ ಪರ ಸಿಎಂ ಕಾಳಜಿ ತೋರಲಿ. ಇತರ ಬಡ ಜನರ ಪರ 10 ಸಾವಿರ ಕೋಟಿ ಅನುದಾನ ನೀಡಲಿ. ಎಲ್ಲ ಸಮುದಾಯದವರು ನಿಮಗೆ ಮತ ಹಾಕಿದ್ದಾರೆ. ಈ ಘಟನೆಯಿಂದ ಸಿದ್ದಮರಾಮಯ್ಯ ಅವರಿಗೆ ಅವಮಾನವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಿದ್ದರಾಮಯ್ಯರಿಗೆ ರಾಜ್ಯದ ಜನರಿಗೆ ಭದ್ರತೆ ನೀಡಲು ಆಗುವುದಿಲ್ಲ ಎಂಬುದು ಸಾಬೀತಾಗುತ್ತದೆ ಎಂದರು.
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ. ಜಾತಿ ಗಣತಿ ಸ್ವೀಕಾರ ಮಾಡಿರುವುದರಿಂದ ಸರ್ಕಾರ ಪತನವಾಗಲಿದೆ. 50-60 ಶಾಸಕರಿಂದ ಸರ್ಕಾರ ಬೀಳಲಿದೆ. ಈ ಸರ್ಕಾರ ಬಹಳ ದಿನ ಮುಂದೆವರೆಯುವುದಿಲ್ಲ ಎಂದರು.
ಗ್ಯಾರೆಂಟಿ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪಿಲ್ಲ. ಶಾಸಕರ ಕ್ಷೇತ್ರಗಳಿಗೂ ಅನುದಾನ ಸಿಗುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿಯನ್ನೂ ಇಟ್ಟಿಲ್ಲ. ಶಾಸಕರಷ್ಟೇ ಅಲ್ಲ, ಏಳೆಂಟೂ ಜನ ಸಚಿವರೂ ಅಸಮಾಧಾನ ಹೊಂದಿದ್ದು, ಎಲ್ಲರೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದರು.