ಹೊಸದಿಗಂತ ದಿಜಿಟಲ್ ಡೆಸ್ಕ್
ಶಾಲಾ ಪಠ್ಯಪುಸ್ತಕರ ಪರಿಷ್ಕರಣೆ ವಿವಾದದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ, ಈ ಹಿಂದಿನ ಪಠ್ಯಪುಸ್ತಕವೇ ಯಥಾವತ್ತಾಗಿ ಇರಲಿದೆ ಎಂಬುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಅವರ ಸಮಿತಿಯನ್ನೇ ಪಿಯು ಪಠ್ಯಪರಿಷ್ಕರಣೆಗೆ ನೇಮಿಸಿದ್ವಿ. ಆದ್ರೆ, ಈಗ ಸಮಿತಿಯನ್ನೇ ವಿಸರ್ಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಪಿಯು ಪಠ್ಯ ಪರಿಷ್ಕರಣೆಯಿಂದ ಸರ್ಕಾರ ಹಿಂದೆ ಸರಿದಿದೆ.
ವಿಧಾನಸೌಧಲ್ಲಿಂದು ಮಾತನಾಡಿದ ಅವರು, ದ್ವಿತೀಯ ಪಿಯುಸಿ ಅಧ್ಯಾಯ 4.2 ಪರಿಷ್ಕರಣೆಯಲ್ಲಿ ಹೊಸ ಧರ್ಮಗಳ ಉದಯದ ಬಗ್ಗೆ ಅಂಶಗಳನ್ನು ಸೇರಿಸಲಾಗಿತ್ತು. ಪರಿಷ್ಕರಣೆ ಕಾರ್ಯವನ್ನು ರೋಹಿತ್ಗೆ ನೀಡಲಾಗಿತ್ತು. ಆದರೆ, ರೋಹಿತ್ ಸಮಿತಿಯನ್ನು ಈಗಾಗಲೇ ವಿಸರ್ಜಿಸಲಾಗಿದೆ. ಹಾಗಾಗಿ ಪಿಯು ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಅದರ ವರದಿ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಲಾ ಪಠ್ಯಪುಸ್ತಕ ಕುರಿತಂತೆ ಬರಗೂರು ಸಮಿತಿ ನೀಡಿದ್ದ ಬಸವಣ್ಣ ಪಠ್ಯವನ್ನು ಶಾಲಾ ಪಠ್ಯಗಳಲ್ಲಿ ಮುಂದುವರೆಸಲಾಗುತ್ತದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಲೋಪಗಳನ್ನು ಸರಿ ಪಡಿಸಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಒಂದೇ ಒಂದು ಪಠ್ಯವನ್ನುಪರಿಷ್ಕರಿಸೋಕೆ ಅಂತಾ ಸಮಿತಿಗೆ ವಹಿಸಲಾಗಿತ್ತು. ಪಿಯು ಪಠ್ಯಪುಸ್ತಕ ಪರಿಷ್ಕರಣೆಗಾಗಿ ಮತ್ತೊಂದು ಸಮಿತಿ ನೇಮಿಸಿಲ್ಲ. ಪರಿಷ್ಕರಣೆ ವಿಚಾರ ಎಲ್ಲಿಂದ ಬರಲಿದೆ? ದ್ವಿತೀಯ ಪಿಯು ಪಠ್ಯಪುಸ್ತಕ ಪರಿಷ್ಕರಣೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.