ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾದ ಮೇಲೆ ವಿಜಯೋತ್ಸವ ಆಚರಣೆ ರ್ಯಾಲಿ ನಡೆಸುವಂತಿಲ್ಲ.
ಚುನಾವಣಾ ಆಯೋಗ ವಿಜಯೋತ್ಸವವನ್ನು ನಿಷೇಧಿಸಿದ್ದು, ಕಾನೂನು ವ್ಯವಸ್ಥೆ ಕಾಪಾಡಲು ಇದು ಅತ್ಯವಶ್ಯ ಎಂದು ಹೇಳಿದೆ. ವಿಶೇಷ ವೀಕ್ಷಕ ಸುಬ್ರತಾ ಗುಪ್ತಾ ಅವರು ಆದೇಶ ಹೊರಡಿಸಿದ್ದು, ಯಾವುದೇ ರೀತಿ ವಿಜಯೋತ್ಸವ ಆಚರಣೆಗೆ ಅವಕಾಶ ಇರುವುದಿಲ್ಲ. ಯಾವ ಸಮಯದಲ್ಲಿ ಯಾವ ರೀತಿ ಸಮಸ್ಯೆಗಳು ಬರುತ್ತವೆ ಹೇಳಲಾಗುವುದಿಲ್ಲ. ಸಮಸ್ಯೆಯನ್ನು ಅನುಭವಿಸುವ ಬದಲು ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸೋದು ಸೂಕ್ತ ಎಂದಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟ್ಗಳು ಸಮಯಕ್ಕೆ ಸರಿಯಾಗಿ ಎಣಿಕೆ ಕೇಂದ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಈಗಾಗಲೇ ದೂರು ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಲವು ಸಿಸಿಟಿವಿ ಕ್ಯಾಮೆರಾಗಳು 5-10 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತಿರಲಿಲ್ಲ. ಈಗ ಸಮಸ್ಯೆ ಪರಿಹರಿಸಲಾಗಿದೆ ಎಂದು ಗುಪ್ತಾ ತಿಳಿಸಿದ್ದಾರೆ.



