ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಡಿದ ಮಾತುಗಳು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದ್ದು, ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ʼಆರ್ಎಸ್ಎಸ್ ಸಂಘಟನೆ ಅಷ್ಟು ಕೆಟ್ಟದ್ದಲ್ಲ. ಹಿಂದೆಯೂ ಕೆಟ್ಟದಾಗಿರಲಿಲ್ಲ. ಬಿಜೆಪಿಯನ್ನು ರಾಜಕೀಯವಾಗಿ ಬೆಂಬಲಿಸದ ಜನರು ಇನ್ನೂ ಆರ್ಎಸ್ಎಸ್ನಲ್ಲಿ ಇದ್ದಾರೆʼ ಎಂದು ಎಂದು ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದರು. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ʼಸಮರ್ಥನೆʼಗಳು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್, ಎಐಎಂಐಎಂ, ಮತ್ತು ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳು ಇದು ಮಮತಾ ಅವರ ʼಅವಕಾಶವಾದಿತನʼ ಎಂದು ತೀವ್ರ ವಾಗ್ದಾಳಿ ನಡೆಸಿವೆ. ಕೇಂದ್ರದಲ್ಲಿ ಆಡಳಿತಾರೂಢ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬ್ಯಾನರ್ಜಿಯವರು ಯತ್ನಿಸುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿವೆ.
ಮತ್ತೊಂದು ವಿಚಾರವೆಂದರೆ ಆರ್ಎಸ್ಎಸ್ ಸಹ ಮಮತಾ ʼಹೊಗಳಿಕೆʼಯನ್ನು ನಿರಾಕರಿಸಿದೆ. ತನ್ನನ್ನು ಹೊಗಳುವ ಬದಲು ಬಂಗಾಳದ ರಾಜಕೀಯ ಹಿಂಸಾಚಾರದ ಇತಿಹಾಸವನ್ನು ಸರಿಪಡಿಸುವ ಕ್ರಮಗಳತ್ತ ಗಮನಹರಿಸುವಂತೆ ಹೇಳಿದೆ. ಆರೆಸ್ಸೆಸ್ಗೆ ಮಮತಾರಿಂದ ಪ್ರಮಾಣಪತ್ರಗಳ ಅಗತ್ಯವಿಲ್ಲ ಎಂದು ಬಿಜೆಪಿ ಹೇಳಿಕೆ ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ