ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ್ದು, ಭಾರತ-ಕೆನಡಾ ಮಧ್ಯೆ ನಿರಂತರ ಉದ್ವಿಗ್ನತೆ ಹೆಚ್ಚಿದೆ.
ಈ ಬಗ್ಗೆ ಮತ್ತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮಾತನಾಡಿದ್ದು, ನಾವು ಸುಮ್ಮನೆ ಆರೋಪ ಮಾಡುತ್ತಿಲ್ಲ. ನಮ್ಮ ಬಳಿ ವಿಶ್ವಾಸಾರ್ಹ ಸಾಕ್ಷ್ಯಗಳಿವೆ ಎಂದಿದ್ದಾರೆ.
ಭಾರತ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಾಕ್ಷ್ಯಾಧಾರಗಳನ್ನು ಒದಗಿಸಿ ನಂತರ ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದೆ. ಆದರೆ ಈವರೆಗೂ ಕೆನಡಾ ಯಾವುದೇ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿಲ್ಲ.
ಭಾರತ ಸರ್ಕಾರ ಏಜೆಂಟ್ಗಳು ಹರ್ದೀಪ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮತ್ತೆ ಟ್ರುಡೋ ಹೇಳಿದ್ದು, ಖಲಿಸ್ತಾನಿ ಉಗ್ರನನ್ನು ಕೆನೆಡಿಯನ್ ಎಂದು ಕರೆದಿದ್ದಾರೆ.
ಕೆನಡಾ ಪ್ರಜೆಯ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್ಸ್ ಭಾಗಿಯಾಗಿದ್ದಾರೆ. ನಮ್ಮ ಪ್ರಜೆಗಳ ಸುರಕ್ಷತೆ ನನ್ನ ಗುರಿಯಾಗಿದೆ, ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಟ್ರುಡೊ ಹೇಳಿದ್ದಾರೆ.
ಭಾರತದ ವಿರುದ್ಧ ನಮಗೆ ಯಾವ ಸಮಸ್ಯೆಯೂ ಇಲ್ಲ, ವಿಶ್ವದಲ್ಲಿ ಭಾರತದ ಪ್ರಾಮುಖ್ಯತೆ ದಿನವೂ ಹೆಚ್ಚುತ್ತಿದೆ. ಸಮಸ್ಯ ಸೃಷ್ಟಿಸುವ ಪ್ರಯತ್ನ ಮಾಡುತ್ತಿಲ್ಲ. ನಾನು ಪ್ರಧಾನಿಯಾಗಿ ನನ್ನ ಜನರ ರಕ್ಷಣೆ ಮಾಡುತ್ತಿದ್ದೇನೆ ಎಂದಿದ್ದಾರೆ.