ಮೇಘನಾ ಶೆಟ್ಟಿ, ಶಿವಮೊಗ್ಗ
ನಾವ್ ಮಲ್ನಾಡ್ ಜನ, ನಮ್ಮದು ಮಂಗಳೂರು ಮಾರ್ರೆ, ನಮ್ದ್ ಹುಬ್ಳೀ ರೀ, ನಮ್ದು ಪಕ್ಕಾ ಮೈಸೂರು.. ಆದರೆ ಎಲ್ಲರೂ ಇರೋದು ಬೆಂಗಳೂರಿನಲ್ಲಿ.
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರಿಗೆ ಅವರ ಊರಿನ ಬಗ್ಗೆ ಎಷ್ಟು ಪ್ರೀತಿ ಇದೆಯೋ ಬೆಂಗಳೂರಿಗೆ ಬಂದಿಳಿದವರಿಗೂ ಅಷ್ಟೇ ಪ್ರೀತಿ ಇರೋದಂತೂ ಪಕ್ಕ. ಯಾಕಂದ್ರೆ ಈ ಊರು ಪಾಠ ಕಲಿಸಿದೆ, ಪ್ರೀತಿ ಕೊಟ್ಟಿದೆ, ಸ್ನೇಹ ಕೊಟ್ಟು ಕಿತ್ತುಕೊಂಡಿದೆ, ನಿರಾಸೆ ಕಂಡಿದ್ದೇವೆ, ದುಡ್ಡಿಲ್ಲದೇ ಒದ್ದಾಡಿದ್ದೇವೆ, ಏರಿಯಾದಲ್ಲೊಂದು ನೆನಪು ಬಿಟ್ಟು ಹೋಗಿದ್ದೇವೆ, ಒಂದಲ್ಲಾ ಎರಡಲ್ಲಾ ನೂರಾರು..
ಒಂದು ಬ್ಯಾಗ್ ಹಾಕ್ಕೊಂದು ಟ್ರೈನ್ ಹತ್ತಿ ಬೆಂಗಳೂರಿಗೆ ಬಂದ ನಾವು, ಬೆಂಗಳೂರಿನಲ್ಲೇ ವರ್ಷ ಕಳೆದಿರುವ ಅಣ್ಣ-ಅಕ್ಕನ ಮಾರ್ಗದರ್ಶನದಲ್ಲಿ ನೆಮ್ಮದಿ ನಿಲ್ದಾಣ ತಲುಪಿರುತ್ತೇವೆ. ಹೊಸ ಕೆಲಸ, ಹೊಸ ಜೀವನ, ಈ ದೊಡ್ಡ ಊರಿನಲ್ಲಿ ಕಳೆದುಹೋಗ್ಬಿಟ್ರೆ ಅನ್ನೋ ಭಯ, ಕ್ಯಾಬ್ನವರು ಗೊತ್ತಿಲ್ಲದ ಜಾಗಕ್ಕೆ ಕರೆದುಕೊಂಡು ಹೋದ್ರೆ ಅನ್ನೋ ಭೀತಿ, ಮೊದಮೊದಲು ಬಸ್ನಲ್ಲಿ ಬ್ಯಾಗ್ನ್ನು ತಬ್ಬಿ ಹಿಡಿದಿದ್ದು, ಮಾಲ್ಗಳಿಗೆ ಹೋಗಿ ಫ್ರೀಯಾಗಿ ಬಟ್ಟೆ ಟ್ರಯಲ್ ನೋಡಿ ಖುಷಿಪಟ್ಟಿದ್ದು, 10 ರೂಪಾಯಿ ಉಳಿಸೋಕೆ ನಡೆದುಕೊಂಡು ಮನೆಗೆ ಬಂದದ್ದು, ತಿಂಗಳ ಕೊನೆಯಲ್ಲಿ ಸಂಬಳ ಎಣಿಸಿದ್ದು. ಇದೆಲ್ಲಾ ಅನುಭವದ ಮೇಲೆ ತಾನೆ ನಾವು ನಾವಾಗಿರೋದು?
ಅದೇನೋ ಹೇಳ್ತಾರಲ್ಲ, ಬೆಂಗಳೂರಿನಲ್ಲಿ ಶ್ರೀಮಂತನಿಗೂ ಜಾಗ ಇದೆ, ಒಂದು ಹೊತ್ತು ಊಟಕ್ಕೂ ಪರದಾಡೋ ಬಡವನಿಗೂ ಜಾಗ ಇದೆ. ಈ ಊರು ಎಲ್ಲರನ್ನೂ ಕೈ ಬೀಸಿ ಅಪ್ಪುತ್ತದೆ. ಮನೆ ಮಠ ಬಿಟ್ಟು ಬೆಂಗಳೂರಿಗೆ ಬಂದವರು ಯಾರೂ ಹಿಂದಿರುಗಿ ನೋಡಿಲ್ಲ.
ಹೌದು, ನಮಗೆಲ್ಲಾ ನಮ್ಮೂರೇ ಇಷ್ಟ, ನಮ್ಮ ಊರಲ್ಲಿ ನೆಮ್ಮದಿ ಇಲ್ಲಿಲ್ಲ ಅಂತಲೇ ಫೀಲಿಂಗ್ ಇದೆ, ಆದ್ರೆ ನಿಜಾ ಹೇಳಿ? ಟ್ರಾಫಿಕ್ ಬಿಟ್ಟು ಇನ್ನೇನಿದೆ ನಿಮಗೆ ಸಮಸ್ಯೆ? ಹೊಸ ಸ್ನೇಹಿತರು ಸಿಕ್ಕಿಲ್ವಾ? ಇಲ್ಲೇ ಹುಡುಗನನ್ನು ಇಷ್ಟಪಟ್ಟಿಲ್ವಾ? ಕೆಲಸಕ್ಕೆ ರಜೆ ಹಾಕಿ ಬೆಂಗಳೂರು ಸುತ್ತಾಡಿಲ್ವಾ? ಸ್ನೇಹಿತರೆಲ್ಲಾ ಮೀಟ್ ಮಾಡೋಕೆ ಬೆಂಗಳೂರು ಮಧ್ಯದ ಯಾವುದೋ ಏರಿಯಾದ ಕೆಫೆ ಹುಡುಕಿಲ್ವಾ? ಯಾವ ಊರು, ನಿಮ್ಮ ಕಥೆ ಏನು ಕೇಳದೆ ಮನೆ ಬಾಡಿಗೆ ಸಿಕ್ಕಿಲ್ವಾ?
ನಮ್ಮ ಬೆಂಗಳೂರು ನಮಗ್ಯಾಕೆ ಇಷ್ಟ? ಅಲ್ಲಲ್ಲೇ ಪಾರ್ಕ್ಗಳು, ತಲೆಎತ್ತಿದರೆ ಮರಗಳು, ಲಕ್ಷಾಂತರ ಬಸ್, ಟ್ರೇನ್ ,ಬೆರಳ ತುದಿಯಲ್ಲಿ ಎಲ್ಲಾ ಸೇವೆ ಲಭ್ಯ.ತಿನ್ನೋದನ್ನು ಮರೆತುಬಿಟ್ರಾ?
ಇಲ್ಲಿ ಸಿಗೋವಷ್ಟು ವೆರೈಟಿ ಫುಡ್ ಇನ್ನೆಲ್ಲಿ ಸಿಗುತ್ತದೆ. ಒಂದು ಇಡ್ಲಿ ತಿನ್ನೋಕೆ ಬಿಡದಿವರೆಗೂ ಹೋಗಿರೋದಿಲ್ವಾ? ಬಿರಿಯಾನಿ ಬಾರಿಸೋಕೆ ಹೊಸಕೋಟೆಗೆ ಹೋಗಲ್ವಾ?
ಒಂದು ರಾಶಿ ಕಾಲೇಜು, ಸ್ಕೂಲು, ಆಸ್ಪತ್ರೆ, ಅದೂ ಇದು ಎಲ್ಲಾ ಇದೆ. ನೈಟ್ ಲೈಫ್ ಹಿಡಿಸೋರಿಗೆ ಕ್ಲಬ್, ಪಬ್, ಇವೆಲ್ಲಾ ಇಷ್ಟಪಡದವರಿಗೆ ಮ್ಯೂಸಿಯಂ, ಗ್ಯಾಲರಿ!
ಯಾವ ಊರಿನಲ್ಲಿ ಇರ್ತೀವಿ ಅನ್ನೋದು ಎಷ್ಟು ಮುಖ್ಯವೋ ನಮ್ಮ ಮನಸ್ಥಿತಿ ಹೇಗಿದೆ ಅನ್ನೋದು ಅಷ್ಟೇ ಮುಖ್ಯ. ಅರಮನೆಯಲ್ಲಿ ಬಿಟ್ಟರೂ ಕಣ್ಣೀರಿಡಬಹುದು, ಗುಡಿಸಲಿನಲ್ಲಿ ಕೂತು ಜೋಕ್ ಮಾಡಬಹುದು ಅಲ್ವಾ?