ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿ (Rajasthan) ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯವನ್ನು ಸಂಘರ್ಷಕ್ಕೆ ಎಳೆಯಲಾಗಿದ್ದು, ಜನರಲ್ಲಿ ಸಂಘರ್ಷ ಮತ್ತು ಭಯೋತ್ಪಾದನೆಯ ಮನಸ್ಥಿತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆತಂಕ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆ (Rajasthan Assembly Elections) ಹಿನ್ನೆಲೆ ಪಾಲಿ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
21ನೇ ಶತಮಾನದಲ್ಲಿ ಭಾರತ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ರಾಜಸ್ಥಾನದ ಪಾತ್ರವು ಬಹಳ ದೊಡ್ಡದಿದೆ. ಹಾಗಾಗಿ ಈ ರಾಜ್ಯದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವ ಸರ್ಕಾರದ ಅಗತ್ಯವಿದೆ. ಆದ್ರೆ ಕಾಂಗ್ರೆಸ್ಗೆ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯಕ್ಕಿಂತ ಬೇರೇನೂ ಮುಖ್ಯವಲ್ಲ. ತುಷ್ಟೀಕರಣ ರಾಜಕೀಯ ಬಿಟ್ಟು ಬೇರೇನೂ ಯೋಚಿಸುವುದಿಲ್ಲ . ಕಾಂಗ್ರೆಸ್ ಪಕ್ಷಕ್ಕೆ ಕುಟುಂಬ ರಾಜಕಾರಣದ ರಾಜಕೀಯವೇ ಸರ್ವಸ್ವವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ 5 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ.ಊಹೆಗೂ ನಿಲುಕದ ಹಿಂಸಾಚಾರ ಘಟನೆಗಳು ಈ ನೆಲದಲ್ಲಿ ನಡೆದಿವೆ. ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಪ್ರಯತ್ನಿಸುತ್ತಿದ್ದು, ಜನರು ಸಹ ಅಭಿವೃದ್ಧಿಗೆ ಆಧ್ಯತೆ ನೀಡುವ ನಮ್ಮ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.