Saturday, March 25, 2023

Latest Posts

ಎಪಿ ನೂತನ‌ ರಾಜ್ಯಪಾಲರ ಪ್ರಮಾಣವಚನ ಸ್ವೀಕಾರಕ್ಕೆ ದಿನಾಂಕ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗಷ್ಟೇ ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ರಾಜಭವನ ನೂತನ ರಾಜ್ಯಪಾಲರ ಪ್ರಮಾಣ ವಚನ ಸ್ವೀಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದಿನಾಂಕ ಕೂಡ ಫಿಕ್ಸ್‌ ಮಾಡಿದೆ. ಇದೇ ತಿಂಗಳ 24ರಂದು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅಧಿಕಾರ ಸ್ವೀಕರಿಸಲಿದ್ದಾರೆ.

ಇಲ್ಲಿಯವರೆಗೆ ಎಪಿ ರಾಜ್ಯಪಾಲರಾಗಿದ್ದ ಬಿಸ್ವಭೂಷಣ ಹರಿಚಂದನ್ ಅವರನ್ನು ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದು, ಇದರೊಂದಿಗೆ ಎಪಿ ಸರ್ಕಾರ ಮಂಗಳವಾರ ಅವರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿತು. ವಿಜಯವಾಡದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಹಲವು ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಬಿಸ್ವಭೂಷಣ ಹರಿಚಂದನ್ ಅವರಿಗೆ ಬೀಳ್ಕೊಡಲಾಯಿತು. ಮೂರು ವರ್ಷಗಳಿಂದ ಎಪಿ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಸಿಎಂ ಶ್ಲಾಘಿಸಿದರು. ಬಿಸ್ವಭೂಷಣ ಅವರು ರಾಜ್ಯದ ಜನತೆಯ ಅಭಿವೃದ್ಧಿಗೆ ಹಿರಿಯರು, ತಂದೆಯಂತೆ ನಿಂತಿದ್ದರು. ಅವರೊಂದಿಗಿನ ಒಡನಾಟವನ್ನು ಎಂದಿಗೂ ಮರೆಯಲಾಗದು ಎಂದು ಸಿಎಂ ನೆನಪಿಸಿಕೊಂಡರು.

ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಅಬ್ದುಲ್ ನಜೀರ್ ಬುಧವಾರ ಆಂಧ್ರಪ್ರದೇಶಕ್ಕೆ ಬರಲಿದ್ದಾರೆ. ಬುಧವಾರ ಸಂಜೆ ದೆಹಲಿಯಿಂದ ಹೊರಟು ಕುಟುಂಬ ಸಮೇತ ಅಮರಾವತಿ ತಲುಪಲಿದ್ದಾರೆ. ಅವರಿಗೆ ಅದ್ಧೂರಿ ಸ್ವಾಗತ ನೀಡಲು ಅಧಿಕಾರಿಗಳು ಸಕಲ ವ್ಯವಸ್ಥೆ ಮಾಡಿದ್ದಾರೆ. ಮೂಲತಃ ಕರ್ನಾಟಕದವರಾದ ಅಬ್ದುಲ್ ನಜೀರ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕೆಲಸ ಮಾಡಿ ಕಳೆದ ತಿಂಗಳು ನಿವೃತ್ತರಾಗಿದ್ದರು. ನಿವೃತ್ತರಾದ ಒಂದು ತಿಂಗಳಲ್ಲೇ ಅವರಿಗೆ ಕೇಂದ್ರ ರಾಜ್ಯಪಾಲರ ಹುದ್ದೆ ನೀಡಿತ್ತು. ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಮಹತ್ವದ ತೀರ್ಪುಗಳನ್ನು ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!