ಹೊಸದಿಗಂತ ವರದಿ ಮಡಿಕೇರಿ:
ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿಹಾಕಿ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಮಾಲ್ದಾರೆಯ (ಬಾಡಗ) ತಂಗಪ್ಪನ್ ಹಾಗೂ ಜಾನಕಿ ದಂಪತಿಯ ಮನೆಗೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಮೂರು ಮಂದಿ ಮುಸುಕುಧಾರಿಗಳು ಆಗಮಿಸಿದ್ದರೆನ್ನಲಾಗಿದೆ. ಮನೆಯ ಹಿಂಬದಿಯ ಬಾಗಿಲ ಮೂಲಕ ಒಳಗೆ ನುಗ್ಗಿದ ದರೋಡೆಕೋರರು, ಚಿನ್ನ ಹಾಗೂ ಹಣ ಎಲ್ಲಿಟ್ಟಿದ್ದೀರಿ ಎಂದು ಬೆದರಿಸಿ ದಂಪತಿಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿದರೆಂದು ಹೇಳಲಾಗಿದೆ.
ನಂತರ ಆಗಂತುಕರು ಮನೆಯಲ್ಲಿದ್ದ ಅಂದಾಜು 1.5 ಲಕ್ಷ ರೂ.ಹಣವನ್ನು ದೋಚಿದ್ದಲ್ಲದೆ, ಅಂತಿಮವಾಗಿ ಜಾನಕಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದಾಡಿದ್ದಾರೆ. ಪರಿಣಾಮವಾಗಿ ಅದರ ಅರ್ಧ ಭಾಗ ದರೋಡೆಕೋರರ ಪಾಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.