ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದರೂ ಸಾಕಾಗೋದಿಲ್ಲ. ಉಡುಪಿಯಲ್ಲಿ ತೆಂಗಿನಕಾಯಿ ತಲೆಮೇಲೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಮೃತಪಟ್ಟಿದೆ.
ಉಡುಪಿಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಕ್ಯಾಂಟೀನ್ ನಡೆಸುತ್ತಿರುವ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಕಂದ ದಕ್ಷ ಮೃತಪಟ್ಟ ಮಗು.
ತಾಯಿ ಸುಚಿತ್ರಾ ತಮ್ಮ ಹಿರಿಯ ಪುತ್ರಿಯನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದಕ್ಷನನ್ನು ಎತ್ತಿಕೊಂಡಿದ್ದರು. ಸಣ್ಣ ರಸ್ತೆಯಲ್ಲಿ ವಿಡಿಯೋ ಕಾಲ್ನಲ್ಲಿ ಮಾತನಾಡುವ ವೇಳೆ 20 ಅಡಿ ಎತ್ತರದ ಮರದಿಂದ ಹಸಿ ತೆಂಗಿನಕಾಯಿಯೊಂದು ಮಗುವಿನ ತಲೆಯ ಮೇಲೆ ಬಿದ್ದಿದೆ.
ಮಗು ಬಿದ್ದ ತಕ್ಷಣ ಕಂದನನ್ನು ಎತ್ತಿಕೊಂಡು ಓಡಿದ್ದಾರೆ. ಸ್ಥಳೀಯರು ಸಹಾಯ ಮಾಡಿದ್ದಾರೆ. ಆದರೆ ರಸ್ತೆ ಇಲ್ಲದ ಕಾರಣ ಆಸ್ಪತ್ರೆಗೆ ತಡವಾಗಿ ಹೋಗಿದ್ದಾರೆ. ತುರ್ತು ಚಿಕಿತ್ಸೆ ನಡೆಸಿದರೂ ಮಗು ಬದುಕುಳಿದಿಲ್ಲ. ದಕ್ಷನ ನಿಧನದಿಂದ ಇಡೀ ಊರಿನಲ್ಲಿ ಮೌನ ತುಂಬಿದೆ.
ಈ ಭಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿವೆ. ಮಳೆಗಾಲದಲ್ಲಿ ಈ ಕಾಲ್ದಾರಿಯಲ್ಲಿ ನಡೆದಾಡುವುದು ತುಂಬಾ ಅಪಾಯಕಾರಿಯಾಗಿದೆ. ವೃದ್ಧರು, ರೋಗಿಗಳನ್ನು ಹೊತ್ತುಕೊಂಡೇ ಹೋಗಬೇಕಾದ ಪರಿಸ್ಥಿತಿಯಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.



