ಒನ್ ಫ್ಯಾಮಿಲಿ ಒನ್ ಟಿಕೆಟ್, ಒಬ್ಬರಿಗೆ ಒಂದೇ ಹುದ್ದೆ: ಕಾಂಗ್ರೆಸ್​ ನವ ಸಂಕಲ್ಪಶಿಬಿರದಲ್ಲಿ ಹೈಕಮಾಂಡ್​ನ ಸಂದೇಶ ತಲುಪಿಸಿದ ಸುರ್ಜೆವಾಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

50 ವರ್ಷದೊಳಗಿನವರಿಗೆ ಮುಂದಾಳತ್ವ,ಒಂದು ಕುಟುಂಬಕ್ಕೆ ಒಂದೇ ಟಿಕೆಟ್​, ಒಬ್ಬರಿಗೆ ಒಂದೇ ಹುದ್ದೆ… ಇದು ಇಂದು ನಡೆದ ಕಾಂಗ್ರೆಸ್​ನ ನವ ಸಂಕಲ್ಪ ಶಿಬಿರದ ನಿರ್ಧಾರಗಳು.

ಹೌದು, ಬೆಂಗಳೂರಿನ ದೇವನಹಳ್ಳಿಯ ರೆಸಾರ್ಟ್​ನಲ್ಲಿ ಕಾಂಗ್ರೆಸ್​ನ ನವ ಸಂಕಲ್ಪ ಶಿಬಿರ ಗುರುವಾರ ಆರಂಭಗೊಂಡಿದ್ದು, .ಉದಯಪುರ ಎಐಸಿಸಿ ಚಿಂತನಾ ಶಿಬಿರದ ನಿರ್ಣಯವನ್ನು ಇಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಈ ಶಿಬಿರ ಶುಕ್ರವಾರವೂ ನಡೆಯಲಿದೆ. ಮೊದಲ ದಿನದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲ ಅವರು ಹೈಕಮಾಂಡ್​ನ ಮಹತ್ವದ ಸಂದೇಶವನ್ನ ಸಭೆಗೆ ರವಾನಿಸಿದರು.

ಮೊದಲಿಗೆ ಸಂಘಟನೆಯ ಎಲ್ಲಾ ಖಾಲಿ ಹುದ್ದೆ ತಕ್ಷಣ ಭರ್ತಿ ಮಾಡುವುದು. ಮುಂದಿನ 15 ದಿನಗಳಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯನ್ನು ಪೂರ್ಣಗೊಳಿಸಬೇಕು.

ನಂತರ ಜಿಲ್ಲಾ, ಬ್ಲಾಕ್ ಹಾಗೂ ಇತರೆ ಘಟಕಗಳಲ್ಲಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಬ್ಲಾಕ್ ಹಾಗೂ ಗ್ರಾಮ ಸಮಿತಿ ನಡುವೆ ಮಂಡಲ ಸಮಿತಿ ಇರಬೇಕು.ಜಿಲ್ಲಾ ಕಚೇರಿಯಲ್ಲಿ ಸಭೆ ಮಾಡಿ ಈ ಸಮಿತಿಯ ವ್ಯಾಪ್ತಿ ನಿರ್ಧರಿಸಬೇಕು. ನಂತರ ವಾರ್ಡ್ ಹಾಗೂ ಗ್ರಾಮ ಸಮಿತಿ ರಚನೆ ಮಾಡುವುದು.

ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಘಟಕಗಳಿಂದ 20 ದಿನಗಳಲ್ಲಿ ವಾರ್ ರೂಮ್ ಸ್ಥಾಪನೆ

ಪದಾಧಿಕಾರಿಗಳಲ್ಲಿ ಶೇ.50 ಮಂದಿ 50 ವರ್ಷ ವಯಸ್ಸಿನ ಒಳಗಿನವರಿರಬೇಕು. ಅನುಭವಕ್ಕೆ ಪ್ರಾಮುಖ್ಯತೆ ಇರಲಿದೆ. ಪಕ್ಷದ ಹಿರಿಯರನ್ನು ಕಡೆಗಣಿಸದೆ ಅವರ ಮಾರ್ಗದರ್ಶನ ಪಡೆಯುತ್ತಾ ಸೂಕ್ತ ಸ್ಥಾನಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲು ತೀರ್ಮಾನ.

ಎಸ್ಸಿ-ಎಸ್ಟಿ ಮೈನಾರಿಟಿ ಮಹಿಳೆಯರಿಗೆ ಸಮಿತಿಗಳಲ್ಲಿ ಆದ್ಯತೆ ಮೇಲೆ ಅವಕಾಶ ಕೊಡಬೇಕು. ಟಿಕೆಟ್ ಹಂಚಿಕೆಯಲ್ಲೂ ಪಾಲನೆ
ಸಂಘಟನೆಯಲ್ಲಿ ಟಾಪ್ ಟು ಬಾಟಮ್ ಯಾರೊಬ್ಬರೂ 5 ವರ್ಷದ ಜವಾಬ್ದಾರಿ ಮುಗಿದ ಕೂಡಲೇ ಬೇರೆಯವರಿಗೆ ಅವಕಾಶ ಕೊಡಬೇಕು.
ಪಕ್ಷದಲ್ಲಿ ಯಾವುದೇ ಪದಾಧಿಕಾರಿಗಳ ಹುದ್ದೆಯ ಗರಿಷ್ಠ ಕಾಲಮಿತಿ 5 ವರ್ಷಗಳಿಗೆ ನಿಗದಿ ಮಾಡಲಾಗಿದೆ. ಅವಧಿ ಪೂರ್ಣಗೊಂಡ ನಂತರ ಸಂಘಟನೆಯಿಂದ ಹೊರ ನಡೆಯುವಂತಿಲ್ಲ. ಪಕ್ಷ ಬೇರೆ ಜವಾಬ್ದಾರಿಗಳನ್ನು ಕಲ್ಪಿಸಿಕೊಡಲಿದೆ. ಜಿಲ್ಲಾಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿರುವವರು ಬೇರೆಯವರಿಗೆ ಅವಕಾಶ ನೀಡುವತ್ತ ಗಮನಹರಿಸಬೇಕು.

ಟಿಕೆಟ್ ಹಂಚಿಕೆಯಲ್ಲಿ ಒನ್ ಫ್ಯಾಮಿಲಿ ಒನ್ ಟಿಕೆಟ್ ಕೊಡುವ ತೀರ್ಮಾನ. ಎಲ್ಲರನ್ನೂ ತಿರಸ್ಕಾರಿಸಲಾಗಲ್ಲ.‌ ಕೆಲವರು ಪಕ್ಷದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ನನ್ನ‌ ಮಗ ಅಮೆರಿಕಾದಿಂದ ಬಂದಿದ್ದಾನೆ, ಇನ್ನೆಲ್ಲಿಂದಲೋ ಬಂದಿದ್ದಾನೆ, ನನ್ನ ಪತ್ನಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆಗೆ ಇನ್ನು ಮುಂದೆ ಅವಕಾಶ ಕೊಡಲ್ಲ. ಪಕ್ಷದ ನಾಯಕರ ಕುಟುಂಬ ಸದಸ್ಯರಿಗೆ ಏಕಾಏಕಿ ಕರೆತಂದು ಟಿಕೆಟ್ ನೀಡುವುದಿಲ್ಲ. ಮೊದಲು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡು ನಂತರ ಅವರು ಅವಕಾಶದ ಅರ್ಹತೆ ಪಡೆಯಬೇಕು.

ಈ ವರ್ಷ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು, ಭಾರತ ರಾಷ್ಟ್ರೀಯ ಕಾಂಗ್ರೆಸ್ ಆಗಸ್ಟ್ 9ರಿಂದ 15ರವರೆಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ವಿಚಾರವಾಗಿ ಪಾದಯಾತ್ರೆ .

ಮೂರು ತಿಂಗಳಿಗೊಮ್ಮೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಬೇಕು. 6 ತಿಂಗಳಿಗೊಮ್ಮೆ ವರ್ಷಕ್ಕೆ ಎರಡು ಬಾರಿ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆ.

150ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಂತೆ ಪಕ್ಷ ಸಂಘಟಿಸಬೇಕು. ಪಕ್ಷಕ್ಕೆ ಈ ಸಂಖ್ಯಾ ಬಲ ಇದ್ದರೆ ಹೆಚ್ಚು ಪರಿಷತ್ ಹಾಗೂ ರಾಜ್ಯಸಭೆ ಸ್ಥಾನಗಳಿಗೆ ಆಯ್ಕೆ ಮಾಡುವ ಅವಕಾಶ ನಮಗೂ ಸಿಗುತ್ತದೆ. ಆಗ ನಿಮಗೆ ನಾವು ರಾಜ್ಯಸಭೆ, ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡಬಹುದು.

ಹೀಗೆ ಹಲವು ಯೋಜನೆ ಬಗ್ಗೆ ರಣದೀಪ್​ ಸಿಂಗ್​ ಸುರ್ಜೆವಾಲ ಅವರು ಸಭೆಯಲ್ಲಿ ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!