ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮೇಲೆ ಹಮಾಸ್ ದಾಳಿ ಹೆಚ್ಚುತ್ತಿದ್ದು, ಈ ಮಧ್ಯೆ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭಿಸಿದ್ದು, 230 ಜನರನ್ನು ಹೊತ್ತ ಮೊದಲ ವಿಮಾನ ಇಂದು (ಗುರುವಾರ) ರಾತ್ರಿ 9 ಗಂಟೆಗೆ ಅಲ್ಲಿಂದ ಹೊರಡಲಿದೆ.
ಈ ಬಗ್ಗೆ ಅಕ್ಟೋಬರ್ 11 ರಂದು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಹಮಾಸ್ ದಾಳಿಯಿಂದಾಗಿ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕಾಗಿ ‘ಆಪರೇಷನ್ ಅಜಯ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಘೋಷಿಸಿದ್ದರು. ಇದರ ಭಾಗವಾಗಿ ಗುರುವಾರ ಇಸ್ರೇಲ್ನಿಂದ ಹೊರಡುವ ಮೊದಲ ರಕ್ಷಣಾ ವಿಮಾನದ ಸಿದ್ಧತೆಗಳ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.
ಸಹಾಯವಾಣಿ ಆರಂಭ
ಇಸ್ರೇಲ್ನಿಂದ ತೆರಳಲು ಬಯಸುವ ಮತ್ತು ನೆರವು ಅಗತ್ಯವಿರುವ ಭಾರತೀಯ ನಾಗರಿಕರಿಗಾಗಿ ಇಸ್ರೇಲ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ಆರಂಭಿಸಿದೆ. ಭಾರತಕ್ಕೆ ತೆರಳಲು ಬಯಸುವ ನಾಗರಿಕರು ಸಹಾಯವಾಣಿ ಮೂಲಕ ಮಾಹಿತಿ ನೀಡಿ. ಅವರನ್ನು ತಾಯ್ನಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದೆ. ಮುಂಬೈನಲ್ಲಿರುವ ಇಸ್ರೇಲ್ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಅವರು ನೀಡಿದ ಮಾಹಿತಿಯಂತೆ, ಇಸ್ರೇಲ್ನಲ್ಲಿ 20,000 ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ.