ಹೊಸದಿಗಂತ ವರದಿ, ಹುಬ್ಬಳ್ಳಿ:
ಚನ್ಮಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ಮೈದಾನಕ್ಕೆ ಮುತ್ತಿಗೆ ಹಾಕಿ ಜಯಂತಿ ಆಚರಣೆ ತಡೆಯಲು ಮುಂದಾದರು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಪೊಲೀಸರು ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಕಾರ್ಯಕರ್ತರು ಹಿಂದೂ ವಿರೋಧಿ, ದೇಶ ದ್ರೋಹಿ ಟಿಪ್ಪು ಸುಲ್ತಾನಗೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, ಟಿಪ್ಪು ಜಯಂತಿ ಇಲ್ಲಿ ಅಷ್ಟೇ ಅಲ್ಲ ರಾಜ್ಯದ ಎಲ್ಲಿಯೂ ಸಹ ಆಚರಣೆ ಮಾಡಬಾರದು. ಟಿಪ್ಪು ಒಬ್ಬ ಮತಾಂಧ, ಹಿಂದೂ ವಿರೋಧಿ, ದೇವಸ್ಥಾನಗಳನ್ನು ನಾಶಪಡಿಸಿದವ. ಕನ್ನಡ ದ್ರೋಹಿಯಾದ ಟಿಪ್ಪು ಜಯಂತಿಯನ್ನು ನಮ್ಮ ನೆಲದಲ್ಲಿ ಯಾವುದೇ ಕಾರಣ ಆಚರಿಸಬಾರದು. ಎಲ್ಲಿಯೇ ನಡೆದರೂ ಶ್ರೀರಾಮ ಸೇನೆ ತಡೆಯುತ್ತದೆ ಎಂದರು.
ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧಿಸಿ ಪ್ರತಿಭಟನೆ ಮಾಡಲು ಬಂದಿದ್ದೇವೆ. ಅಷ್ಟರಲ್ಲಿ ಪೊಲೀಸರು ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಮಹಾನಗರ ಪಾಲಿಕೆ ಟಿಪ್ಪು ಜಯಂತಿಗೆ ಅನುಮತಿ ನೀಡಿರುವುದು ಸರಿಯಲ್ಲ. ಎಲ್ಲ ಮಹಾಪುರುಷರ ಜಯಂತಿ ಆಚರಣೆ ಅವಕಾಶ ನೀಡಿದ್ದಾರೆ. ಆದರೆ ಅವರ ಜೊತೆ ಟಿಪ್ಪು ಹೊಲಿಕೆ ಮಾಡುವುದು ಸೂಕ್ತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳನ್ನು ಮತಾಂತರಿಸಿದ ವ್ಯಕ್ತಿ ಜಯಂತಿ ಬೇಡ:
ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ ವ್ಯಕ್ತಿ ಜಯಂತಿ ಅವಕಾಶ ಮಾಡಿಕೊಡಲ್ಲ. ಪಾಲಿಕೆ ನಿರ್ಧಾರ ಖಂಡನೀಯ.ಟಿಪ್ಪು ಜಯಂತಿ ಚನ್ನಮ್ಮ ಮೈದಾನದಲ್ಲಿ ನಡೆಸಬಾರದು ಎಂದು ಹೈಕೋರ್ಟ್ ಪಿಐಎಲ್ ಹಾಕುತ್ತೇನೆ . ಕನಕ ಜಯಂತಿ ಆಚರಣೆ ಮಾಡುತ್ತೇವೆ ಎಂದರು.
ಟಿಪ್ಪು ಜಯಂತಿಗೆ ಭರದ ಸಿದ್ಧತೆ:
ನಗರದ ಚನ್ನಮ್ಮ ಮೈದಾನದಲ್ಲಿ ಎಐಎಂಐಎಂ ವತಿಯಿಂದ ಟಿಪ್ಪು ಜಯಂತಿ ಆಚರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದ್ದು ಮೈದಾನದ ಸುತ್ತಮುತ್ತಲೂ ಬಾರಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ಎಐಎಂಐಎಂ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಅವರು ಪಕ್ಷದ ಅಧ್ಯಕ್ಷರಿಂದ ವಿರೋಧವಿದ್ದರೂ ಸಹ ಗುರುವಾರ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾಗಿದ್ದಾರೆ. ಪಾಲಿಕೆಯಿಂದ ಷರತ್ತು ಬದ್ಧ ಅನುಮತಿ ಪಡೆದು ಹಾಗೂ 10 ಸಾವಿರ ಶುಲ್ಕ ಪಾವತಿಸಿ ಆಚರಣೆ ಮಾಡುತ್ತಿದ್ದಾರೆ.
ಪೊಲೀಸ್ ಬಿಗಿ ಬಂದೋಬಸ್ತ್:
ಬುಧವಾರ ಟಿಪ್ಪುಜಯಂತಿ ಸೇರಿದಂತೆ ವಿವಿಧ ಮಹಾನ್ ಪುರುಷರ ಆಚರಣೆಗೆ ಅನುಮತಿ ನೀಡದ ಹಿನ್ನೆಲೆ ಮೈದಾನದಲ್ಲಿ ನಿಲ್ಲಿಸಿದ ವಾಹನಗಳನ್ನು ಹೊರ ಹಾಕಿ ಬಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಚನ್ನಮ್ಮ ವೃತ್ತ, ಸಂಗೊಳಿ ರಾಯಣ್ಣ ವೃತ್ತ, ಸ್ಟೇಶನ್ ರಸ್ತೆ ಹಾಗೂ ಪಾಲಿಕೆ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ