ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿನಹಾಳ ಗ್ರಾಮದಲ್ಲಿ ರೈತನೊಬ್ಬ ತನ್ನ ಶೇಂಗಾ ಬೆಳೆಯನ್ನು ಪವರ್ ಗ್ರಿಡ್ ವಿಂಡ್ ಪವರ್ ಸಿಬ್ಬಂದಿ ಹಾಳುಮಾಡಿದ್ದಾರೆ, ನ್ಯಾಯ ಕೊಡಿಸಿ ಎಂದು ವಿದ್ಯುತ್ ಕಂಬ ಏರಿ ಕುಳಿತಿದ್ದಾರೆ.
ಈ ಸ್ಥಳದಲ್ಲಿ ಅತಿಯಾದ ಬಿಸಿಲಿದ್ದು, ಇಂಥ ಸಮಯದಲ್ಲಿಯೂ 400 ಮೀಟರ್ ಎತ್ತರದ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಕುಳಿತಿರುವ ರೈತನ ಬಗ್ಗೆ ಎಲ್ಲರಿಗೂ ಆತಂಕವಾಗಿದೆ.
ರೈತ ನಾಗರಾಜ್ ಗೊಂದಿ ತಮ್ಮ ಜಮೀನಿನಲ್ಲಿ ಶೇಂಗಾ ಬೆಳೆ ಹಾಕಿದ್ದರು. ಇದನ್ನು ಪವರ್ ಗ್ರೀಡ್ ವಿಂಡ್ ಪವರ್ ಸಿಬ್ಬಂದಿ ಹಾಳು ಮಾಡಿದ್ದಾರೆ, ಹೈ ಟೆನ್ಷನ್ ವಿದ್ಯುತ್ ವೈರ್ ಕನೆಕ್ಷನ್ ನೀಡುವ ಉದ್ದೇಶದಿಂದ ತನಗೆ ಹೇಳದಂತೆ ನನ್ನ ಜಾಗದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ. ಇದರಿಂದ ಎಲ್ಲ ಬೆಳೆ ಹಾಳಾಗಿದೆ. ನನಗೆ ಅನ್ಯಾಯವಾಗಿ ಪರಿಹಾರ ನೀಡಿ ಎಂದು ರೈತ ಪಟ್ಟುಹಿಡಿದಿದ್ದಾರೆ.
ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ನಾಗರಾಜ್ ಆರೋಗ್ಯದ ಬಗ್ಗೆ ಕುಟುಂಬದವರು ಭಯಪಡುತ್ತಿದ್ದಾರೆ. ಬೆಳಗ್ಗೆ ಒಂಬತ್ತು ಗಂಟೆಗೆ ಕಂಬ ಹತ್ತಿ ಕುಳಿತಿದ್ದಾರೆ.ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಾಧಾನಪಡಿಸುವ ಅಥವಾ ಮಾತುಕತೆ ನಡೆಸುವ ಪ್ರಯತ್ನ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.



