ಹೊಸದಿಗಂತ ವರದಿ, ಹಾವೇರಿ:
ಹಾವೇರಿ ಜಿಲ್ಲೆಗೆ ಇಂಜನೀಯರಿಂಗ್ ಕಾಲೇಜ್ ಮಾಡಿದ್ದು ನಮ್ಮ ಸರ್ಕಾರ, ಮೆಡಿಕಲ್ ಕಾಲೇಜ್ ಮಾಡಿದ್ದು ನಮ್ಮ ಸರ್ಕಾರ, ನೀರಾವರಿ ಯೋಜನೆಗಳನ್ನು ತಂದಿದ್ದು ನಮ್ಮ ಸರ್ಕಾರ, ಮೆಗಾ ಡೈರಿ ಮಾಡಿದ್ದು ನಮ್ಮ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ನ ಸಿದ್ಧರಾಮಯ್ಯ ಅವರು ಮಾಡಿದ ಆಪಾದನೆಗಳಿಗೆ ತಿರುಗೇಟು ನೀಡಿದರು.
ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಗೆ ಮೆಗಾ ಎಪಿಎಂಸಿ ಮಾಡಿದ್ದು ನಮ್ಮ ಸರ್ಕಾರ, ಟೆಕ್ಸ್ಟೈಲ್ ಪಾರ್ಕ ಮಾಡಿದ್ದು ನಮ್ಮ ಸರ್ಕಾರ, ಇಡೀ ಹಾವೇರಿ ಜಿಲ್ಲೆ ಅಭಿವೃದ್ಧಿ ಮಾಡಿದ್ದ ನಮ್ಮ ಸರ್ಕಾರ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹಾವೇರಿಯಲಿ ಜರುಗಿದ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರ ಹಾವೇರಿ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ ಎಂಬ ಆರೋಪಕ್ಕೆ ಮುಖ್ಯಮಂತ್ರಿಗಳು ಬರೋಬ್ಬರಿ ತಿರುಗೇಟಿ ನೀಡುವ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿ.ಎಸ್.ಯಡಿಯೂರಪ್ಪ ಸಿಎಂ ಇದ್ದ ಸಂದರ್ಭದಲ್ಲಿ ದಿ. ಸಿ.ಎಂ.ಉದಾಸಿ ಮತ್ತು ನಾವು ಸೇರಿ ೨೦೧೨ರಲ್ಲಿ ಹಾವೇರಿಗೆ ಮಡಿಕಲ್ ಕಾಲೇಜ್ ಮಂಜೂರ ಮಾಡಿಸಿದ್ದೆವೆ. ಆದರೆ ೨೦೧೩ರಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ಹಾವೇರಿಯ ಮೆಡಿಕಲ್ ಕಾಲೇಜನ್ನು ಗದಗ್ಗೆ ಹಾಕಿದ್ದು ಇವರ ಸಾಧನೆ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ಹರಿಹಾಯ್ದರು.
ಹಾವೇರಿಗೆ ಮತ್ತೆ ವೈದ್ಯಕೀಯ ಕಾಲೇಜ್ ಬರಬೇಕಾದರೆ ೨೦೧೮-೧೯ರಲ್ಲಿ ಮತ್ತೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕಾಯಿತು. ಇದಕ್ಕೆ ಕೇಂದ್ರ ಸರ್ಕಾರ ಶೇ.೪೦ ಹಾಗೂ ರಾಜ್ಯ ಸರ್ಕಾರ ಶೇ.೬೦ರ ಅನುದಾನದ ಅಡಿಯಲ್ಲಿ ಮೆಡಿಕಲ್ ಕಾಲೇಜಿನ ಕೆಲಸ ಕಾರ್ಯಗಳು ನಡೆಯುತ್ತಿವೆ. ಅತೀ ಶೀಗ್ರದಲ್ಲಿ ಉದ್ಘಾಟನೆ ಮಾಡಲಿದ್ದೇವೆ. ಹಾವೇರಿ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಯಾರಾದರೂ ನೈತಿಕತೆಯಿಂದ ಮಾತನಾಡಲು ಸಾಧ್ಯವಾದರೆ ಅದು ನಮ್ಮಿಂದ ಮಾತ್ರ ಸಾಧ್ಯ ಎಂದರು.
ವೇದಿಕೆಯಲ್ಲಿ ಬೃಹತ್ ನಿರಾವರಿ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಸಿದ್ದರಾಜ ಕಲಕೋಟಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಸಿಇಓ ಮಹಮ್ಮದ ರೋಷನ್ ಹಾಗೂ ಇತರರಿದ್ದರು.