ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಡಾನ್ನಿಂದ ಭಾರತೀಯರನ್ನು ರಕ್ಷಿಸಿ ವಾಪಸ್ ಕರೆತರುವ ಕಾರ್ಯಾಚರಣೆ ‘ಆಪರೇಶನ್ ಕಾವೇರಿ’ (Operation Kaveri) ಮುಕ್ತಾಯಗೊಂಡಿದೆ.
ಈ ಆಪರೇಶನ್ ಕಾವೇರಿ ಕಾರ್ಯಾಚರಣೆಯಡಿ ಸುಮಾರು 3,862 ಭಾರತೀಯರನ್ನು ಸುಡಾನ್ನಿಂದ ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ (Central Government) ತಿಳಿಸಿದೆ.
ಸುಡಾನ್ನಲ್ಲಿ ಇದ್ದ ಭಾರತೀಯರು ಎಲ್ಲರೂ ವಾಪಸ್ ಬರಲಿಲ್ಲ. ಯಾರೆಲ್ಲ ವಾಪಸ್ ಬರುವ ಇಚ್ಛೆ ವ್ಯಕ್ತಪಡಿಸಿದ್ದಿರೋ, ಅವರನ್ನು ಯಾರನ್ನೂ ಅಲ್ಲಿ ಬಿಟ್ಟಿಲ್ಲ ಎಂದು ಹೇಳಿದೆ. ಹಾಗೇ, ಆಪರೇಶನ್ ಕಾವೇರಿಯಲ್ಲಿ ನಿರಂತರವಾಗಿ ಪಾಲ್ಗೊಂಡ ಭಾರತೀಯ ವಾಯುಪಡೆ ವಿಮಾನಗಳ ಸಿಬ್ಬಂದಿ, ನೌಕಾಪಡೆ ಹಡಗುಗಳ ಸಿಬ್ಬಂದಿ, ಮತ್ತಿತರ ಅಧಿಕಾರಿಗಳಿಗೆಲ್ಲರಿಗೂ ಕೇಂದ್ರ ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್ ಧನ್ಯವಾದ ಸಲ್ಲಿಸಿದ್ದಾರೆ. ‘ನಮ್ಮ ಮಿಷನ್ ಯಶಸ್ವಿಯಾಗಿ ಮುಗಿಯಿತು’ ಎಂದಿದ್ದಾರೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಎಸ್.ಜೈಶಂಕರ್ ‘ಇಂದು ಮುಂಜಾನೆ 47 ಭಾರತೀಯರನ್ನು ಒಳಗೊಂಡ, ಭಾರತೀಯ ವಾಯುಪಡೆಯ ಸಿ 130 ಜೆ ವಿಮಾನ ಜೆಡ್ಡಾದಿಂದ ಭಾರತವನ್ನು ತಲುಪಿತು. ಇಲ್ಲಿಗೆ ಆಪರೇಶನ್ ಕಾವೇರಿ ಮುಕ್ತಾಯವಾಯಿತು. ಈ ಕಾರ್ಯಾಚರಣೆಯಡಿ ಒಟ್ಟು 3862 ಭಾರತೀಯರನ್ನು ಸುಡಾನ್ನಿಂದ ಸ್ಥಳಾಂತರ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
ಸುಡಾನ್ನಲ್ಲಿ ಭದ್ರತಾ ವ್ಯವಸ್ಥೆ ತೀವ್ರ ಹದಗೆಟ್ಟಿತ್ತು.ಆ ದೇಶದ ವಿವಿಧ ಭಾಗಗಳಲ್ಲಿ ಇದ್ದ ಭಾರತೀಯರನ್ನು ಪೋರ್ಟ್ ಸುಡಾನ್ಗೆ ಕರೆತರುವುದೇ ಸವಾಲು ಆಗಿತ್ತು. ಆದರೆ ವಿದೇಶಗಳಲ್ಲಿ ಇರುವ ಭಾರತೀಯರ ಸುರಕ್ಷತೆ, ಭದ್ರತೆ ಬಗ್ಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇಟ್ಟುಕೊಂಡಿರುವ ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದು ಜೈಶಂಕರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
An Indian Air Force C130 J flight carrying 47 passengers has landed in India.
With this arrival, 3862 persons have been moved out of Sudan through #OperationKaveri.
Prime Minister @narendramodi ’s commitment to ensuring the safety and security of all Indians abroad was our… pic.twitter.com/Ham0Ci3zdh
— Dr. S. Jaishankar (@DrSJaishankar) May 5, 2023
ಭಾರತೀಯ ವಾಯುಪಡೆಯ 17 ವಿಮಾನಗಳು ಮತ್ತು ನೌಕಾಪಡೆಯ 5 ನೌಕೆಗಳ ಮೂಲಕ ಭಾರತೀಯರನ್ನು ಪೋರ್ಟ್ ಸುಡಾನ್ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ಭಾರತಕ್ಕೆ ವಾಯುಪಡೆಯ ವಿಮಾನಗಳು ಮತ್ತು ಇತರ ವಾಣಿಜ್ಯ ಬಳಕೆ ವಿಮಾನಗಳ ಮೂಲಕ ಕರೆತರಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಮತ್ತು ಸುಡಾನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಸಂಪೂರ್ಣವಾಗಿ ಸಹಕರಿಸಿದ ಸೌದಿ ಅರೇಬಿಯಾಕ್ಕೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಚಾಡ್, ಈಜಿಪ್ಟ್, ಫ್ರಾನ್ಸ್, ದಕ್ಷಿಣ ಸುಡಾನ್, ಯುಎಇ, ಯುಕೆ, ಯುಎಸ್ಎ ಮತ್ತು ಯುಎನ್ಗಳು ನಮಗೆ ನೀಡಿದ ಸಹಕಾರವನ್ನೂ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.