ಹೊಸದಿಗಂತ ವರದಿ,ಬಳ್ಳಾರಿ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆ ನಿಲ್ಲಿಸುವ ಮಾತೇ ಇಲ್ಲ, ನಮ್ಮ ನಡಿಗೆ ನೀರಿಗಾಗಿ, ಗುಂಡು ಹಾರಿಸಿದರೂ ಬಿಡುವ ಮಾತೇ ಇಲ್ಲ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹೇಳಿದರು.
ಮೇಕದಾಟು ಯೋಜನೆ ಅನುಷ್ಠಾನ ಗೊಳಿಸುವಂತೆ ಒತ್ತಾಯಿಸಿ ಕೆಪಿಸಿಸಿ ಆಶ್ರಯದಲ್ಲಿ ನಡೆಯುಲಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್-19, ಒಮಿಕ್ರಾನ್ ನೆಪ ಇಟ್ಟುಕೊಂಡು ಬಿಜೆಪಿ ಸರ್ಕಾರ ಕರ್ಫ್ಯೂ ವಿಧಿಸಿ ನಮ್ಮ ಪಾದಯಾತ್ರೆ ಮೊಟಕುಗೊಳಿಸಲು ಹುನ್ನಾರ ನಡೆಸಿದೆ. ಇಂತಹ ಬೆದರಿಕೆಗೆ ಬಗ್ಗುವ ಜನರು ನಾವಲ್ಲ, ಕೋವಿಡ್-19, ಒಮಿಕ್ರಾನ್ ಹಿನ್ನೆಲೆ ಜಾರಿಗೊಳಿಸಿದ ನಿಯಮಗಳನ್ನು ನಾವು ತಪ್ಪದೇ ಪಾಲಿಸುತ್ತೇವೆ, ಆದರೇ, ಪಾದಯಾತ್ರೆ ನಿಲ್ಲಿಸುವ ಮಾತೇ ಇಲ್ಲ, ಗುಂಡು ಹಾರಿಸಿದರೂ ನಮ್ಮನಡಿಗೆ ನಿಲ್ಲಿಸುವ ಮಾತೇ ಇಲ್ಲ ಎಂದು ನಮ್ಮನಾಯಕರು ಎಚ್ಚರಿಸಿದ್ದಾರೆ. ಅವರ ಹೇಳಿಕೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ, ಗಣಿನಾಡು ಬಳ್ಳಾರಿಯಿಂದ 38 ಕ್ಕೂ ಹೆಚ್ಚು ವಾಹನಗಳ ಮೂಲಕ ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ನೀರಿಗಾಗಿ ನಡಿಗೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಅವರ ಜನ ವಿರೋದಿ ಆಡಳಿತಕ್ಕೆ ರಾಜ್ಯವಷ್ಟೇ ಅಲ್ಲ ದೇಶದ ಜನರು ಬೇಸತ್ತಿದ್ದು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯಿಂದ ಬಿಜೆಪಿ ಅವರಿಗೆ ನಡುಕ ಶುರುವಾಗಿದೆ. ಕೆಪಿಸಿಸಿಯಿಂದ ನೀರಿಗಾಗಿ ನಡಿಗೆ ಪ್ರಾರಂಭಿಸಿದ್ದು, ಇದರಿಂದ ನಮಗೆ ಮುಂಬರುವ ಚುನಾವಣೆಯಲ್ಲಿ ಹಿನ್ನೆಡೆಯಾಗಲಿದೆ ಎನ್ನುವ ಉದ್ದೇಶದಿಂದ ಬಿಜೆಪಿ ಅವರು ಒಮಿಕ್ರಾನ್ ನೆಪ ಮುಂದಿಟ್ಟುಕೊಂಡು ವಿಕೇಂಡ್ ಕರ್ಪ್ಯೂ ಜಾರಿಗೆ ತಂದಿದೆ. ಜನಪರ ಹೋರಾಟಕ್ಕೆ ನಮ್ಮ ಬೆಂಬಲ ಇರಲಿದೆ, ಬಿಜೆಪಿ ಅವರು ಎಷ್ಟೇ ಕುತುಂತ್ರ ಮಾಡಿದರೂ ನಡೆಯೊಲ್ಲ, ನಾವೂ ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇವೆ, ನಮ್ಮನ್ನು ಬಂದಿಸಿ, ಕೇಸ್ ಹಾಕಿದರೂ ಅಥವಾ ಗುಂಡು ಹಾರಿಸಿದರೂ ನಾವು ನಮ್ಮ ಹೋರಾಟ ಕೈಬಿಡೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕನಕಪುರ ತಾಲೂಕಿನ ಸಂಗಮದಿಂದ ಬೆಂಗಳೂರು ನಗರದ ವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದೇವೆ. ಹೆಚ್ಚು ಜನ ಒಟ್ಟಿಗೆ ಸೇರುವುದು ಸರಿಯಲ್ಲ ಎನ್ನುವ ಕಾರಣಕ್ಕೆ ತಂಡ ತಂಡವಾಗಿ ನಮ್ಮ ಕಾರ್ಯಕರ್ತರು ಸಂಗಮದ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿ.ಆರ್.ಎಲ್.ಶ್ರಿನಿವಾಸ್ ಸೇರಿದಂತೆ ವಿವಿಧ ನಾಯಕರಿದ್ದರು.