ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜ ದೈವದ ನಿಂದನೆ: ಸಾಮೂಹಿಕ ಪ್ರಾರ್ಥನೆಗೆ ಕರೆ ನೀಡಿದ ವಿಶ್ವಹಿಂದು ಪರಿಷತ್

ಹೊಸದಿಗಂತ ವರದಿ,ಮಂಗಳೂರು:

ಸಾಲೆತ್ತೂರಿನ ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜ ದೈವದ ನಿಂದನೆ, ಅಪಹಾಸ್ಯ ಖಂಡಿಸಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಮತ್ತು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಜ. 11 ರಂದು ಸಾಮೂಹಿಕ ಪ್ರಾರ್ಥನೆ ನಡೆಸಲು ವಿಶ್ವಹಿಂದು ಪರಿಷತ್ ಕರೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲ ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ಜ. 11ರಂದು ಮಂಗಳವಾರ ಸಾಮೂಹಿಕ ಪ್ರಾರ್ಥನೆ ನಡೆಸಲು ಸಮಸ್ತ ಹಿಂದು ಬಂಧುಗಳಲ್ಲಿ ವಿಶ್ವಹಿಂದು ಪರಿಷತ್ ವಿನಂತಿಸಿದೆ.
ದೈವಸ್ಥಾನ, ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ಮುಖಂಡರು, ಸಂಘಟನೆಗಳು, ಸಂಘ ಸಂಸ್ಥೆಗಳು, ಭಕ್ತರು, ಸಮಸ್ತ ಹಿಂದುಗಳು ಒಟ್ಟು ಸೇರಿ ನಮ್ಮ ಊರುಗಳ ದೈವಸ್ಥಾನ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಬೇಕು ಎಂದು ವಿಶ್ವಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ವಿನಂತಿಸಿದ್ದಾರೆ.
ಕಳೆದ ಹಲವಾರು ಸಮಯಗಳಿಂದ ಹಿಂದುಗಳ ಆರಾಧ್ಯ ದೈವ ದೇವರನ್ನು ಅಪಹಾಸ್ಯ ಮಾಡುವುದು, ನಿಂದನೆ ಮಾಡುವುದು, ಅಶ್ಲೀಲ ಚಿತ್ರಗಳನ್ನು ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದು, ಪವಿತ ನಾಗನ ಕ್ಷೇತ್ರಗಳನ್ನು ಅಪವಿತ್ರಗೊಳಿಸುವುದು, ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳ ಕಾಣಿಕೆ ಡಬ್ಬಿಗಳಿಗೆ ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವುದು, ಮುಂದುವರಿದ ಭಾಗವಾಗಿ ಸ್ವಾಮಿ ಕೊರಗಜ್ಜ ದೈವದ ವೇಷ ಹಾಕಿ ವಿಚಿತ್ರವಾಗಿ ಕುಣಿದು ವಿಕೃತ ಸಂತೋಷಪಡುವ ಈ ಎಲ್ಲ ಘಟನೆಗಳು ಲಕ್ಷಾಂತರ ಹಿಂದೂಗಳ ಮನಸ್ಸಿಗೆ ನೋವನ್ನುಂಟುಮಾಡಿದೆ. ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಎಲ್ಲ ಕೃತ್ಯಗಳನ್ನು ಖಂಡಿಸಿ ದೈವ ದೇವರುಗಳ ಮೊರೆ ಹೋಗಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಮತ್ತು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸಾಮೂಹಿಕ ಪ್ರಾರ್ಥನೆಗೆ ಕರೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!