ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಕೇಂದ್ರದ ದಾಳಿಗಳ ಹೊರತಾಗಿಯೂ ಆಮ್ ಆದ್ಮಿ ಪಕ್ಷದ ಕೆಲಸ ನಿಲ್ಲುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೇವರು ನಮ್ಮೊಂದಿಗಿದ್ದಾನೆ ಮತ್ತು ಇಂತಹ ದಾಳಿಗಳಿಂದ ಪಕ್ಷವು ಹೆದರುವುದಿಲ್ಲ ಎಂದಿದ್ದಾರೆ.
“ಸಿಬಿಐ ತನ್ನ ಕೆಲಸ ಮಾಡುತ್ತಿದೆ, ಹೆದರುವ ಅಗತ್ಯವಿಲ್ಲ, ಸಿಬಿಐಗೆ ಕೆಲಸ ಮಾಡಲು ಬಿಡಬೇಕು, ನಮಗೆ ತೊಂದರೆ ಕೊಡಲು ಮೇಲಿಂದ ಮೇಲೆ ಆದೇಶವಿದೆ, ಅಡೆತಡೆಗಳು ಬರುತ್ತವೆ, ಆದರೆ ಕೆಲಸ ನಿಲ್ಲುವುದಿಲ್ಲ. ಮನೀಷ್ ಸಿಸೋಡಿಯಾ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ ಈ ಹಿಂದೆಯೂ ಅವರ ವಿರುದ್ಧ ದಾಳಿಗಳು ನಡೆದಿವೆ, ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ನಮ್ಮ ಎಲ್ಲಾ ನಾಯಕರು ಇಂತಹ ದಾಳಿಗಳನ್ನು ಎದುರಿಸಿದ್ದಾರೆ. ಇದು ನಮ್ಮನ್ನು ತಡೆಯುವುದಿಲ್ಲ” ಎಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮನೀಷ್ ಸಿಸೋಡಿಯಾ ಅವರನ್ನು ಅತ್ಯುತ್ತಮ ಶಿಕ್ಷಣ ಸಚಿವ ಎಂದು ವಿದೇಶಿ ಪ್ರಕಟಣೆ ಘೋಷಿಸಿದೆ ಮತ್ತು ಅದೇ ದಿನ ಸಿಬಿಐ ಅವರ ಮೇಲೆ ದಾಳಿ ನಡೆಸಿದೆ, ಇದು ದೆಹಲಿ ಸರ್ಕಾರದ ಮೇಲೆ ದಾಳಿ ಮಾಡಲು ಕೇಂದ್ರವು ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸೂಚಿಸುತ್ತದೆ. ಶಿಕ್ಷಣ ಸಚಿವ ಸಿಸೋಡಿಯಾ ಅವರ ಮೇಲಿನ ದಾಳಿಯು ದೆಹಲಿ ಸರ್ಕಾರವನ್ನು ಹೆದರಿಸುವ ಪ್ರಯತ್ನವಾಗಿದೆ ಎಂದು ಆಪ್ ಆರೋಪ ಮಾಡಿದೆ.