ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ದೆಹಲಿಯಲ್ಲಿ ಯಮುನಾ ನದಿ (Yamuna River) ಬುಧವಾರದಂದು ದಾಖಲೆಯ ಮಟ್ಟದಿಂದ ಉಕ್ಕಿ ಹರಿಯುತ್ತಿದೆ.
ಈ ಹಿನ್ನೆಲೆ ಯಮುನಾ ನದಿಯ ಸಮೀಪದಲ್ಲಿರುವ ತಗ್ಗು ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸುವಂತೆ ದೆಹಲಿ (Delhi) ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಆದೇಶಿಸಿದ್ದಾರೆ.
ನಾವು ಜೀವಗಳು, ಆಸ್ತಿಗಳನ್ನು ರಕ್ಷಿಸಬೇಕಾಗಿದೆ. ಯಮುನಾ ನದಿಯ ಸಮೀಪವಿರುವ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಯಮುನಾದಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಅಗತ್ಯವಿದ್ದರೆ ಶಾಲೆಗಳನ್ನು ಪರಿಹಾರ ಶಿಬಿರಗಳನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಗೆ ಕೇಜ್ರಿವಾಲ್ ಸೂಚನೆ ನೀಡಿದರು.
ದೆಹಲಿಯ ಯಮುನಾ ನದಿ ನೀರಿನ ಮಟ್ಟ ಬುಧವಾರ 207.71 ಮೀಟರ್ಗೆ ಏರಿದ್ದು, 1978 ರಲ್ಲಿ ನೀರಿನ ಮಟ್ಟ 207.49 ಮೀಟರ್ಗಳಷ್ಟು ಏರಿಕೆ ಆಗಿತ್ತು. ನೀರಿನ ಮಟ್ಟ ಏರಿಕೆ ಆಗುತ್ತಿದ್ದಂತೆ ಕೇಜ್ರಿವಾಲ್ ತುರ್ತು ಸಭೆ ಕರೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ಯಮುನಾದಲ್ಲಿ ನೀರಿನ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡಲು ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್ನಿಂದ ಸೀಮಿತ ನೀರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ದೇಶದ ರಾಜಧಾನಿಯಲ್ಲಿ ಪ್ರವಾಹದ ಸುದ್ದಿ ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ನಾವು ಒಟ್ಟಾಗಿ ದೆಹಲಿಯ ಜನರನ್ನು ಈ ಪರಿಸ್ಥಿತಿಯಿಂದ ರಕ್ಷಿಸಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.