ಬಿಜೆಪಿ ನೂಪುರ್‌ ಶರ್ಮಾರನ್ನು ದೆಹಲಿ ಸಿಎಂ ಅಭ್ಯರ್ಥಿಯನ್ನಾಗಿಸಲಿದೆ: ಅಸಾದುದ್ದೀನ್‌ ಒವೈಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾದಿ ಮುಹಮ್ಮದ್ ಕುರಿತಾಗಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಮುಂದಿನ ದಿನಗಳಲ್ಲಿ ದೊಡ್ಡ ನಾಯಕಿಯಾಗಿ ಬೆಳೆಸಲಿದೆ, ಆಕೆಯನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಮಾಡಲಾಗುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.
“ನೂಪುರ್ ಶರ್ಮಾ ನೀಡಿದ್ದ ಹೇಳಿಕೆಗೆ ಆಕೆಯನ್ನು ಬಂಧಿಸಬೇಕು ಮತ್ತು ಭಾರತದ ಕಾನೂನಿನ ಪ್ರಕಾರ ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಂವಿಧಾನದ ಪ್ರಕಾರ ಕ್ರಮ ಕೈಗೊಳ್ಳುವುದನ್ನು ನಾವು ಬಯಸಿದ್ದೇವೆ. ಮುಂಬರುವ ಆರೇಳು ತಿಂಗಳಲ್ಲಿ ನೂಪುರ್ ಶರ್ಮಾರನ್ನು ದೊಡ್ಡ ನಾಯಕಿಯನ್ನಾಗಿ ಬೆಳೆಸಲಾಗುತ್ತದೆ ಎಂಬ ವಿಚಾರವು ನನಗೆ ತಿಳಿದಿದೆ. ನೂಪುರ್ ಶರ್ಮಾ ಅವರನ್ನು ದೆಹಲಿ ಸಿಎಂ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆಯೂ ಇದೆ ಎಂದು ಓವೈಸಿ ಹೇಳಿದ್ದಾರೆ.
ʼನೂಪುರ್ ಶರ್ಮಾ ಅವರನ್ನು ಬಿಜೆಪಿ ರಕ್ಷಿಸುತ್ತಿದೆ ಎಂದ ಅವರು, ತೆಲಂಗಾಣ ಮುಖ್ಯಮಂತ್ರಿ ಆಕೆಯನ್ನು ಬಂಧಿಸಿ ತೆಲಂಗಾಣಕ್ಕೆ ಕರೆತರುವಂತೆ ಕೋರಿದರುʼ.
ನೂಪುರ್‌ ಶರ್ಮಾ ವಿರುದ್ಧ ಎಂಐಎಂ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಆಕೆಯನ್ನು ಅವರನ್ನು ರಕ್ಷಿಸುತ್ತಿದೆ, ಬಂಧಿಸುವಂತೆ ನಾವು ಪ್ರಧಾನಿಗೆ ವಿನಂತಿಸುತ್ತಿದ್ದೇವೆ. ಆದರೆ ಅವರು ನಮ್ಮ ಮಾತನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಗಲಭೆ ಆರೋಪಿಯ ಮನೆ ಧ್ವಂಸ ಕಾರ್ಯಾಚರಣೆ ಕುರಿತು ಉತ್ತರ ಪ್ರದೇಶದ ಯೋಗಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಿಡಿಕಾರಿದ ಒವೈಸಿ “ಪ್ರಯಾಗ್‌ರಾಜ್ ನಲ್ಲಿ ಗಲಭೆಗೆ ಸಂಬಂಧಿಸಿದ ವ್ಯಕ್ತಿ ವಾಸವಿದ್ದ ಮನೆಯನ್ನು ಕೆಡವಲಾಗಿದೆ. ಆ ಮನೆಯಲ್ಲಿ ಆರೋಪಿಯ ಪುತ್ರಿಯೂ ವಾಸವಿದ್ದರು. ಆಕೆಯ ತಂದೆ ಪ್ರತಿಭಟನೆಯನ್ನು ಆಯೋಜಿಸಿದ್ದರು. ನೀವು ಹೇಗೆ ಆ ಮನೆಯನ್ನು ಕೆಡವಿದ್ದೀರಿ? ನೈಸರ್ಗಿಕ ನ್ಯಾಯ ತತ್ವದನ್ವಯ ಯೋಗಿ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!