ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಓಖ್ಲಾದಲ್ಲಿ ಬುಧವಾರ ಬೆಳಗ್ಗೆ ವಾಣಿಜ್ಯ ಬಳಕೆಯ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯ ವಿವರ:
ಇಂದು ಬುಧವಾರ ಬೆಳಗ್ಗೆ ಸುಮಾರು 10:43 ರ ವೇಳೆಗೆ ಓಖ್ಲಾದ ಸ್ಥಳೀಯ ಕಮ್ಯುನಿಟಿ ಹಾಲ್ ಬಳಿಯ ಗೋಡೌನ್ನ ಹೊರಗೆ ಈ ಅಪಘಾತ ಸಂಭವಿಸಿದೆ. ಘಾಜಿಯಾಬಾದ್ನಿಂದ ಕೈಗಾರಿಕಾ ಸಿಲಿಂಡರ್ಗಳನ್ನು ಹೊತ್ತು ತಂದಿದ್ದ ‘ಎಸ್ಎಂ ಟ್ರೇಡರ್ಸ್’ ಸಂಸ್ಥೆಗೆ ಸೇರಿದ ಟಾಟಾ 407 ವಾಣಿಜ್ಯ ವಾಹನದಿಂದ ಕಾರ್ಮಿಕರು ಸಿಲಿಂಡರ್ಗಳನ್ನು ಇಳಿಸುತ್ತಿದ್ದರು. ಈ ಸಮಯದಲ್ಲಿ ಆಕ್ಸಿಜನ್ ಸಿಲಿಂಡರ್ ಒಂದು ಆಕಸ್ಮಿಕವಾಗಿ ಟ್ರಕ್ನಿಂದ ರಸ್ತೆಗೆ ಬಿದ್ದಿದ್ದು, ತಕ್ಷಣವೇ ಸ್ಫೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಫೋಟದ ತೀವ್ರತೆಗೆ ಓರ್ವ ಬಲಿ
ಸ್ಫೋಟದ ತೀವ್ರತೆಗೆ ಜೈಪುರ ಮೂಲದ ಮೋಹಿತ್ ಸಿಂಗ್ (35) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇವರು ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಉಮೇಶ್, ಅರವಿಂದ್, ಮನೋಜ್ ಮತ್ತು ಪಂಕಜ್ ಎಂಬ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಏಮ್ಸ್ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದ್ದು, ಸದ್ಯ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:
ಮುಂದುವರೆದ ಪೊಲೀಸ್ ತನಿಖೆ
ಪ್ರಾಥಮಿಕ ತನಿಖೆಯ ಪ್ರಕಾರ, ಎಸ್ಎಂ ಟ್ರೇಡರ್ಸ್ ಸಂಸ್ಥೆಯು ಕಳೆದ 1-2 ವರ್ಷಗಳಿಂದ ಜಿಎಸ್ಟಿ ನೋಂದಣಿಯೊಂದಿಗೆ ಈ ಬಾಡಿಗೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದು ಓಖ್ಲಾ ಕೈಗಾರಿಕಾ ವಲಯದಲ್ಲಿ ದಿನಕ್ಕೆ 70 ರಿಂದ 80 ಸಿಲಿಂಡರ್ಗಳನ್ನು ಪೂರೈಸುವ ಸ್ಥಳೀಯ ವಿತರಕ ಸಂಸ್ಥೆಯಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಆಕ್ಸಿಜನ್ ರೀಫಿಲ್ಲಿಂಗ್ ಪ್ಲಾಂಟ್ ಇರಲಿಲ್ಲ, ಬದಲಿಗೆ ಘಾಜಿಯಾಬಾದ್ನ ರಾಮ್ ಅವತಾರ್ ಎಂಬ ಸರಬರಾಜುದಾರರಿಂದ ಸಿಲಿಂಡರ್ಗಳನ್ನು ಮೊದಲೇ ತುಂಬಿಸಿ ತರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದು, ಸದ್ಯ ತನಿಖೆ ಮುಂದುವರೆದಿದೆ.



