ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ದಿನಗಳಲ್ಲಿ ವಿಶ್ವವನ್ನೇ ನಡುಗುವಂತೆ ಮಾಡಿದ್ದು ಕೊರೋನಾ ಎಂಬ ಮಹಾಮಾರಿ.
ಜನರ ಜೀವ, ಜೀವನಕ್ಕೆ ಕುತ್ತು ತಂದು, ಪರಿಹಾರವೇ ಇಲ್ಲ ಎಂದು ತಲೆಮೇಲೆ ಕೈ ಹೊತ್ತು ಕೂರುವಂತೆ ಮಾಡಿದ್ದು ಕೊರೋನಾ.
ಬೇಸತ್ತ ಜನತೆಗೆ ಭರವಸೆಯ ಬೆಳಕಿನಂತೆ ಕಾಣಿಸಿದ್ದು ವ್ಯಾಕ್ಸಿನ್. ಬೇರೆ ದೇಶಗಳು ವ್ಯಾಕ್ಸಿನ್ ಮೊರೆ ಹೋದಾಗ ಭಾರತ ಸುಮ್ಮನೆ ಕೂರಲಿಲ್ಲ. ಭಾರತದಲ್ಲಿಯೇ ಲಸಿಕೆ ತಯಾರಿಸಿ ನಮ್ಮ ದೇಶದಲ್ಲಷ್ಟೇ ಅಲ್ಲ, ಇತರೆ ದೇಶದ ಜನರ ಪ್ರಾಣ ಉಳಿಸಿದ್ದು ವ್ಯಾಕ್ಸಿನ್.
ಲಸಿಕಾ ಅಭಿಯಾನದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಭಾರತದ ಎರಡು ಸಂಸ್ಥೆಗಳು, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್. ಈ ಎರಡೂ ಸಂಸ್ಥೆಯ ಸಂಸ್ಥಾಪಕರಿಗೆ ಈ ಸಾಲಿನ ಪದ್ಮಪ್ರಶಸ್ತಿ ಒಲಿದು ಬಂದಿದೆ.
ಕೋವ್ಯಾಕ್ಸಿನ್ ಕಂಡುಹಿಡಿದು, ತಯಾರು ಮಾಡಿದ ಕೃಷ್ಣ ಎಲ್ಲಾ ಮತ್ತು ಸುಚಿತ್ರಾರಿಗೆ ಹಾಗೂ ಸೆರಂ ಸಂಸ್ಥೆಯ ಕೋವಿಶೀಲ್ಡ್ ತಯಾರಕ ಸೈರಸ್ ಪೂನಾವಾಲಗೆ ಪದ್ಮ ಗೌರವ ಸಂದಿದೆ.