ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗಾಲಿ ಕುರ್ಚಿಯಲ್ಲಿಯೇ ಕುಳಿತು ದೇಶದಾದ್ಯಂತ ಸಂಚರಿಸಿ ಸಾಕ್ಷರತೆಯನ್ನು ಉತ್ತೇಜಿಸಿದ್ದ ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಕೆ.ವಿ. ರಬಿಯಾ ವಿಧಿವಶರಾಗಿದ್ದಾರೆ.
ಅವರಿಗೆ 59 ವರ್ಷ ವಯಸ್ಸಾಗಿತ್ತು. ರಬಿಯಾ ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಲ್ಲಿ ಬಳಲುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಕೊಟ್ಟಕ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
1966 ರ ಫೆಬ್ರವರಿ 25 ರಂದು ತಿರುರಂಗಡಿಯ ಕರಿವೆಪ್ಪಿಲ್ನ ವೆಲ್ಲಿಕಾಡ್ನಲ್ಲಿ ಮೂಸಕುಟ್ಟಿ ಹಾಜಿ, ಬಿಯಾಚುಟ್ಟಿ ಹಜ್ಜುಮ್ಮ ದಂಪತಿ ಪುತ್ರಿಯಾಗಿ ಜನಿಸಿದ್ದ ರಬಿಯಾ, ಹುಟ್ಟಿನಿಂದಲೇ ಕಾಲಿನ ದೋಷದಿಂದ ಬಳಲುತ್ತಿದ್ದರು. ಇದನ್ನು ಲೆಕ್ಕಿಸದೆ ಸಾಧನೆಯತ್ತ ಚಿತ್ತವಿಟ್ಟ ಅವರು, ಎಸ್ಎಸ್ಎಲ್ಸಿ ಬಳಿಕ ತಿರುರಂಗಡಿಯ ಪಿಎಸ್ಎಂಒ ಕಾಲೇಜಿಗೆ ಸೇರಿದ್ದರು. ಆದರೆ ಪದವಿಪೂರ್ವ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ ಮನೆಯಲ್ಲಿಯೇ ಅಧ್ಯಯನ ಮಾಡಿ ಪದವಿಗಳನ್ನು ಪಡೆದರು. ತಮ್ಮ ೩೮ನೇ ವಯಸ್ಸಿನಲ್ಲಿ ಜಾರಿಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾದ ಅವರಿಗೆ ಬಳಿಕ ಕುತ್ತಿಗೆಯ ಕೆಳಗೆ ಭಾಗಶಃ ಪಾರ್ಶ್ವವಾಯು ಕಾಡಿತ್ತು. ಅಸಹನೀಯ ನೋವಿನ ನಡುವೆಯೂ ಅವರು ತಮ್ಮ ನೆನಪುಗಳನ್ನು ನೋಟ್ಬುಕ್ ಪುಟಗಳಲ್ಲಿ ಬರೆದಿರಿಸಿ ‘ಸೈಲೆಂಟ್ ನಂಬರ್ಸ್’ ಎಂಬ ಪುಸ್ತಕ ಪೂರ್ಣಗೊಳಿಸಿದ್ದರು. ಅವರು ‘ಡ್ರೀಮ್ಸ್ ಹ್ಯಾವ್ ವಿಂಗ್ಸ್’ ಎಂಬ ಆತ್ಮಚರಿತ್ರೆ ಸೇರಿದಂತೆ ಒಟ್ಟು ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ.
ರಾಷ್ಟ್ರೀಯ ಯುವ ಪ್ರಶಸ್ತಿ, ರಾಜ್ಯ ಸಾಕ್ಷರತಾ ಮಿಷನ್ ಪ್ರಶಸ್ತಿ, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಪ್ರಶಸ್ತಿ, ಕಣ್ಣಕಿ ಸ್ತ್ರೀ ಶಕ್ತಿ ಪುರಸ್ಕಾರ ಮತ್ತು ವಾಣಿ ತಾರರತ್ನಂ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದ ರಬಿಯಾಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.