ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಇನ್ನು ಈ ಹತ್ಯಾಕಾಂಡಕ್ಕೆ ಕಾರಣರಾದ ಮೂವರು ಭಯೋತ್ಪಾದಕರ ರೇಖಾಚಿತ್ರಗಳು ಮತ್ತು ಗುರುತುಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಮೂವರು ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಕೂಡ ತಿಳಿದುಬಂದಿದೆ.
ಮೊದಲ ರೇಖಾಚಿತ್ರವು ಅನಂತನಾಗ್ ಮೂಲದ ಆದಿಲ್ ಹುಸೇನ್ ಥೋಕರ್ ಎಂದು ಗುರುತಿಸಲಾಗಿದೆ.
ಎರಡನೇ ಭಯೋತ್ಪಾದಕನನ್ನು ಅಲಿ ಭಾಯ್ ಎಂದು ಗುರುತಿಸಲಾಗಿದ್ದು, ಇವನನ್ನು ತಲ್ಹಾ ಭಾಯ್ ಎಂದೂ ಕರೆಯುತ್ತಾರೆ.
ಮೂರನೇ ಭಯೋತ್ಪಾದಕನನ್ನು ಸುಲೇಮಾನ್ ಎಂದೂ ಕರೆಯಲ್ಪಡುವ ಹಾಸಿಮ್ ಮೂಸಾ ಎಂದು ಗುರುತಿಸಲಾಗಿದೆ.
ಮೂವರು ಎಲ್ಇಟಿ ಭಯೋತ್ಪಾದಕರಲ್ಲಿ, ಮೂಸಾ ಮತ್ತು ತಲ್ಹಾ ಪಾಕಿಸ್ತಾನಿ ಭಯೋತ್ಪಾದಕರು ಎಂದು ಶಂಕಿಸಲಾಗಿದೆ, ಆದರೆ ಥೋಕರ್ ಕಾಶ್ಮೀರಿ ಸ್ಥಳೀಯ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇನ್ನು ಈ ಮೂವರು ಭಯೋತ್ಪಾದಕರನ್ನು ಹುಡುಕಿ ಕೊಟ್ಟವರಿಗೆ ಅಥವಾ ಇವರ ಬಗ್ಗೆ ಮಾಹಿತಿ ನೀಡುವವರಿಗೆ ತಲಾ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಈಗಾಗಲೇ ಪೊಲೀಸರು ಘೋಷಿಸಿದ್ದಾರೆ. ಮಾಹಿತಿ ನೀಡಲು ಸಾರ್ವಜನಿಕರು ಅನಂತನಾಗ್ನ ಎಸ್ಎಸ್ಪಿಯನ್ನು 9596777666 ಅಥವಾ ಅನಂತನಾಗ್ನಲ್ಲಿರುವ ಪಿಸಿಆರ್ ಅನ್ನು 9596777666 ಗೆ ಸಂಪರ್ಕಿಸಲು ಕೇಳಲಾಗಿದೆ.
ಬಿಹಾರದ ಮಧುಬನಿಯಲ್ಲಿ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನ್ಯಾಯ ಸಿಗುವವರೆಗೆ ಭಾರತ ವಿಶ್ರಾಂತಿ ಪಡೆಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಠಿಣ ಎಚ್ಚರಿಕೆ ನೀಡಿದ ಅವರು ಭಾರತವು ಭಯೋತ್ಪಾದಕರನ್ನು ಭೂಮಿಯ ಕೊನೆಯವರೆಗೂ ಬೆನ್ನಟ್ಟುತ್ತದೆ ಎಂದು ಶಪಥ ಮಾಡಿದ್ದಾರೆ.