ಹೊಸದಿಗಂತ ವರದಿ, ಮಡಿಕೇರಿ:
ಅಗ್ನಿ ಆಕಸ್ಮಿಕದಿಂದ ಪೆಯಿಂಟ್ ಮತ್ತು ಫ್ಯಾನ್ಸಿ ಮಳಿಗೆ ಹಾಗೂ ಗೋದಾಮು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗೋಣಿಕೊಪ್ಪಲಿನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ರಾಜಸ್ಥಾನ ಮೂಲದ ಇಮ್ತಾರಾಂ ಎಂಬವರಿಗೆ ಸೇರಿದ ಸ್ವಂತ ಮಳಿಗೆಗಳು ಇದಾಗಿದ್ದು, ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ. ಪೆಯಿಂಟ್ ದಾಸ್ತಾನು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಸುಮಾರು 80 ಲಕ್ಷ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಮಂಗಳವಾರ ಮುಂಜಾನೆ ಈ ಘಟನೆ ನಡೆದಿದ್ದು, ಗೋಣಿಕೊಪ್ಪ ಅಗ್ನಿಶಾಮಕ ದಳದ ಅಧಿಕಾರಿ ಪಳಂಗಪ್ಪ ಅವರ ನೇತೃತ್ವದ ತಂಡ ಅಗ್ನಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿತು. ಸಾರ್ವಜನಿಕರು ಕೂಡಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಇಮ್ತಾರಾಂ ಕಳೆದ 35 ವರ್ಷಗಳಿಂದ ಗೋಣಿಕೊಪ್ಪಲಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.