ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಪುಣ್ಯತಿಥಿಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಜನಸಂಘದ ಮೊದಲನೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ದೇಶದ ಉದ್ದಗಲಕ್ಕೂ ಪಂಡಿತ್ ದೀನದಯಾಳ ಉಪಾಧ್ಯಾಯರು ಪ್ರವಾಸ ಮಾಡಿದ್ದರು. ಭಾರತೀಯ ಸಂಸ್ಕಂತಿ, ಇತಿಹಾಸ ಮತ್ತು ಭಾರತದ ಶ್ರೇಷ್ಠತೆಯ ಕುರಿತು ಅರಿವು ಮೂಡಿಸಿದ ಮೇಧಾವಿ ರಾಷ್ಟ್ರಪುರುಷ ಎಂದು ವಿಶ್ಲೇಷಿಸಿದರು.
ಪಂಡಿತ್ ದೀನದಯಾಳ ಉಪಾಧ್ಯಾಯರು 1916ರಲ್ಲಿ ಜನಿಸಿದ್ದು, ಸಂಘದ ಪ್ರಚಾರಕರಾಗಿ ಅತ್ಯಂತ ಬದ್ಧತೆಯಿಂದ ಕೆಲಸ ಮಾಡಿದವರು. ಎಳೆಯ ವಯಸ್ಸಿನಲ್ಲೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅವರು ರಾಷ್ಟ್ರೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್ ಪ್ರಚಾರಕರಾಗಿ ಕೆಲಸ ಮಾಡಿದ್ದರು. ಬಳಿಕ 1951ರಲ್ಲಿ ಗುರೂಜಿ ಅವರ ಆದೇಶದಂತೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಶ್ಯಾಮಪ್ರಸಾದ ಮುಖರ್ಜಿ ಅವರು ಜನಸಂಘವನ್ನು ಹುಟ್ಟು ಹಾಕಿ ಅದರ ಬೆಳವಣಿಗೆಗೆ ಶ್ರಮಿಸಿದರು ಎಂದು ವಿವರಿಸಿದರು.
ಅಂತ್ಯೋದಯ ಮತ್ತು ಏಕಾತ್ಮತಾ ಮಾನವತಾವಾದದ ಚಿಂತನೆಯನ್ನು ನೀಡಿದ ಉಪಾಧ್ಯಾಯ ಪಕ್ಷವನ್ನು ದೇಶದ ಉದ್ದಗಲಕ್ಕೆ ಸದೃಢವಾಗಿ ಕಟ್ಟಲು ಶ್ರಮಿಸಿದವರು. ಇದಕ್ಕಾಗಿ ತಮ್ಮನ್ನೇ ತಾವು ಸಮರ್ಪಿಸಿಕೊಂಡ ಶ್ರೇಷ್ಠ ವ್ಯಕ್ತಿ.
ಅವರ ಕಲ್ಪನೆಗಳು, ಆದರ್ಶ ಚಿಂತನೆಗಳನ್ನು ಇಂದಿನ ನಮ್ಮ ವಿಶ್ವವಂದ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಸಾಕಾರಗೊಳಿಸುತ್ತಿದ್ದಾರೆ. ಗ್ರಾಮ ಸಡಕ್ ಯೋಜನೆ, ನಲ್ ಜಲ್, ಗ್ರಾಮೀಣ ಕ್ಷೇತ್ರಕ್ಕೆ ಮನೆ ಮನೆಗೂ ವಿದ್ಯುತ್ ಸಂಪರ್ಕ, ಗ್ರಾಮಗಳಲ್ಲಿ ಪ್ರತಿಯೊಬ್ಬರು ಸ್ವಾವಲಂಬಿ ಆಗಬೇಕೆಂಬ ಅಂತ್ಯೋದಯದ ಪರಿಕಲ್ಪನೆಯನ್ನು ಮೋದಿ ಅವರು ಜಾರಿಗೊಳಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯ ಕಾರ್ಯಾದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಕೋಶಾಧ್ಯಕ್ಷ ಸುಬ್ಬ ನರಸಿಂಹ, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮೊದಲಾದವರಿದ್ದರು.