ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಆರೋಗ್ಯ ಅಧಿಕಾರಿಗಳಿಗೆ ಪಾನಿಪುರಿ ದೊಡ್ಡ ತಲೆನೋವಾಗಿ ಕಾಡತೊಡಗಿದೆ. ಸಂಜೆಯಾಗುತ್ತಲೇ ಪಾನಿಪುರಿ ತಿನ್ನಲು ಮುಗಿಬೀಳುವ ಜನ, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಅವರದ್ದು. ಪಾನಿಪುರಿ ತಯಾರಿಸುವ ವೇಳೆ ಸ್ವಚ್ಛತೆಯನ್ನು ಕಾಪಾಡುವುದಿಲ್ಲ ಎಂಬ ಆರೋಪಗಳಿವೆ. ಸ್ವಚ್ಛತೆ ಕಾಪಾಡದ ಕಾರಣ ಇದರಿಂದ ರೋಗಗಳು ಹರಡಲು ಇದು ಕಾರಣವಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಮಳೆಗಾಲದಲ್ಲಿ ಹೆಚ್ಚಾಗಿ ಟೈಫಾಯ್ಡ್ ಪ್ರಕರಣಗಳು ದಾಖಲಾಗಿವೆ. ಇದರ ಮೂಲ ಬೆನ್ನತ್ತಿ ಹೊರಟ ಆರೋಗ್ಯಾಧಿಕಾರಿಗಳಿಗೆ ಸಿಕ್ಕಿದ್ದು ಸ್ವಚ್ಛತೆ ಕಾಪಾಡದ ಸ್ಥಳಗಳಲ್ಲಿನ ಪಾನಿಪುರಿ ಸೇವನೆ. ತೆಲಂಗಾಣದಲ್ಲಿ ಮೇ ತಿಂಗಳಿನಿಂದ ಈವರೆಗೆ 2700 ಟೈಫಾಯ್ಡ್ ಪ್ರಕರಣಗಳು ದಾಖಲಾಗಿದೆ. ಜುಲೈ ತಿಂಗಳಲ್ಲಿ ಇದು 2752ಕ್ಕೆ ಏರಿಕೆಯಾಗಿವೆ. ಈ ಕಾಯಿಲೆ ಬರುತ್ತಿರುವುದೇ ಬೀದಿಬದಿಯ ಆಹಾರಗಳಿಂದಲೇ ಎಂಬುದು ಈಗ ಬಹುತೇಕ ಖಚಿತಗೊಂಡಿದೆ.
ಜನರು ಹೆಚ್ಚಾಗಿ ಪಾನಿಪುರಿ ತಿನ್ನುತ್ತಿರುವುದರಿಂದಲೇ ಟೈಫಾಯ್ಡ್ ಕಾಣಿಸಿಕೊಳ್ಳುತ್ತಿದೆ. ಸ್ವಚ್ಚ ಕುಡಿಯುವ ನೀರು, ಆಹಾರ ಸೇವನೆಯಿಂದ ರೋಗಗಳನ್ನು ತಡೆಗಟ್ಟಬಹುದು. ಬೀದಿಬದಿ ಆಹಾರಗಳಿಂದ ಇನ್ನೂ ಹೆಚ್ಚು ರೋಗಗಳು ಕಾಣಿಸಿಕೊಳ್ಳುತ್ತವೆ. ಜನರು ಮಳೆಗಾಲದಲ್ಲಿ ಇದನ್ನು ತಿನ್ನಬಾರದು ಎಂದು ಎಂದು ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್ ರಾವ್ ಎಚ್ಚರಿಕೆ ನೀಡಿದ್ದಾರೆ.