ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡ ಇಲ್ಲ ಎಂದ ನ್ಯೂಜಿಲ್ಯಾಂಡ್‌ ಉಪಪ್ರಧಾನಿಗೆ ಬಂತು ಪನ್ನುನ್ ಬೆದರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಲಿಸ್ತಾನ್ ಪ್ರತ್ಯೇಕತಾವಾದಿ (Khalistan terrorist) ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಇಲ್ಲ ಎಂದು ನ್ಯೂಜಿಲೆಂಡ್‌ನ (New Zealand) ಉಪಪ್ರಧಾನಿ ವಿನ್‌ಸ್ಟನ್ ಪೀಟರ್ಸ್‌ ಹೇಳಿದ್ದಾರೆ.

ಇದರ ಬೆನ್ನಲ್ಲೇ ಖಲಿಸ್ತಾನಿ ಭಯೋತ್ಪಾದಕ, ಕೆನಡಾ ನಿವಾಸಿ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun), ನ್ಯೂಜಿಲ್ಯಾಂಡ್‌ನ ಉಪಪ್ರಧಾನಿಗೇ ಬೆದರಿಕೆ ಒಡ್ಡಿದ್ದಾನೆ.

ಪನ್ನುನ್ ಕಳೆದ ವಾರ ಕೆನಡಾದಲ್ಲಿ ಭಾರತದ ಉನ್ನತ ರಾಜತಾಂತ್ರಿಕರ ವಿರುದ್ಧ ಹಿಂಸಾತ್ಮಕ ದಾಳಿಯನ್ನು ಸೂಚಿಸುವ ಪೋಸ್ಟರ್ ಅನ್ನು ಪ್ರಕಟಿಸಿದ್ದ. ʼಸಿಖ್‌ ಫಾರ್‌ ಜಸ್ಟಿಸ್‌ʼ ಸಂಘಟನೆಯ ನಾಯಕನಾಗಿರುವ ಪನ್ನುನ್, ನಿಜ್ಜರ್ ಪ್ರಕರಣದಲ್ಲಿ ಪೀಟರ್ಸ್ ಭಾರತಕ್ಕೆ ನೀಡಿರುವ ಬೆಂಬಲವನ್ನು ಸಹಿಸಿಲ್ಲ. ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಕಳೆದ ವರ್ಷ ಕೆನಡಾದ ಸರ್ರೆಯಲ್ಲಿ ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು. ಇದರ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದ ಭಾರತ, ಕೆನಡಾದ ಬಳಿ ಇರಬಹುದಾದ ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಿತ್ತು. ಸಾಕ್ಷ್ಯಗಳನ್ನು ನೀಡಲಾಗಿದೆ ಎಂದು ಕೆನಡಾ ಹೇಳಿದೆ. ಆದರೆ ಆ ಸಾಕ್ಷ್ಯಗಳಲ್ಲಿ ಭಾರತೀಯ ಏಜೆಂಟ್‌ಗಳ ಆಪಾದಿತ ಒಳಗೊಳ್ಳುವಿಕೆಯನ್ನು ದೃಢೀಕರಿಸುವ ನಿರ್ಣಾಯಕ ಪುರಾವೆಗಳು ಇಲ್ಲ ಎಂದು ನ್ಯೂಜಿಲೆಂಡ್‌ ಉಪ ಪ್ರಧಾನಿ ವಿನ್‌ಸ್ಟನ್ ಪೀಟರ್ಸ್‌ ಹೇಳಿದ್ದಾರೆ.

ನಾಲ್ಕು ದಿನಗಳ ಭೇಟಿಗಾಗಿ ಭಾರತದಲ್ಲಿರುವ ಪೀಟರ್ಸ್‌, ಸಂದರ್ಶನವೊಂದರಲ್ಲಿ ಈ ಮಾತನ್ನು ಹೇಳಿದ್ದು, ಕೆನಡಾ ಪ್ರಸ್ತುತಪಡಿಸಿದ ಪುರಾವೆಗಳನ್ನು ಪೀಟರ್ಸ್ ಬಹಿರಂಗವಾಗಿ ಪ್ರಶ್ನಿಸಿದ್ದರು.ತರಬೇತಿ ಪಡೆದ ವಕೀಲನಾಗಿ ನಾನು ಸರಿಯಾಗಿ ನೋಡಬಲ್ಲೆ. ಇಲ್ಲಿ ಪ್ರಕರಣದ ಸಾಕ್ಷಿ ಎಲ್ಲಿದೆ? ಒಂದೂ ಇಲ್ಲ ಎಂದು ಅವರು ಹೇಳಿದ್ದಾರೆ.

ಅವರ ಈ ನಿಲುವು ಕ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಮಂಡಿಸಿದ ನಿರೂಪಣೆಗೆ ತದ್ವಿರುದ್ಧವಾಗಿದೆ. ಯುಎಸ್, ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳನ್ನು ಒಳಗೊಂಡಿರುವ ಫೈವ್- ಐಸ್‌ ತನಿಖಾ ಸಮೂಹದ ನಡುವಿನಿಂದಲೇ ಬಂದಿರುವ ಪೀಟರ್ಸ್ ಅವರ ಈ ಕಾಮೆಂಟ್‌, ಇದೀಗ ಕೆನಡಾದ ನಿಲುವನ್ನು ದುರ್ಬಲಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!