ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ರಚಾಲ್ ಹಗರಣದಲ್ಲಿ ಈಗಾಗಲೇ ಶಿವಸೇನಾ ಮುಖಂಡ ಸಂಜಯ್ ರಾವತ್ ನ್ಯಾಯಾಂಗ ಬಂಧನದಲ್ಲಿದ್ದು, ಇದೇ ಪ್ರಕರಣದಲ್ಲಿ ಇದೀಗ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೂ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಇಡಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಅವರ ಹೆಸರಿದೆ.
ಪತ್ರಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ 2006 -07 ಸಂಜಯ್ ರಾವತ್ ಅವರು ಆಗಿನ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಜೊತೆಗೂಡಿ ಸಭೆ ನಡೆಸಿದ್ದರು ಎಂದು ಇಡಿ ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ಆರೋಪಿಸಲಾಗಿದೆ.
ಕಾಂಗ್ರೆಸ್, ಶಿವಸೇನೆ ಜೊತೆಗೆ ಎನ್ಸಿಪಿ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ, ಸಿದ್ಧಾಂತದ ತಿಕ್ಕಾಟದಲ್ಲಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಈಗಿನ ಸಿಎಂ ಏಕನಾಥ್ ಶಿಂಧೆ ಬಣ ಸಿಡಿದೆದ್ದು ಸರ್ಕಾರ ಪತನಕ್ಕೆ ಕಾರಣವಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ರನ್ನು ಪತ್ರಚಾಲ್ ಹಗರಣದಲ್ಲಿ ಬಂಧಿಸಲಾಗಿತ್ತು.