ಬಸ್​ನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು: ಬಸ್​ ಡ್ರೈವರ್, ಕಂಡಕ್ಟರ್ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ತಲೆಗೆ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ.

ಬಂಧಿತ ಬಸ್​ ಚಾಲಕನನ್ನು ಕುಪ್ಪೆಪದವು ನಿವಾಸಿ ಕಾರ್ತಿಕ್ ಆರ್ ಶೆಟ್ಟಿ(30) ಮತ್ತು ಬಸ್​ ನಿರ್ವಾಹಕ ಅಂಬ್ಲಮೊಗರು ನಿವಾಸಿ ದಂಶೀರ್ (30) ಎಂದು ಗುರುತಿಸಲಾಗಿದೆ.

ಸೆ 7ರಂದು ಉಳ್ಳಾಲದ ಮಾಸ್ತಿಕಟ್ಟೆಯಿಂದ ಬರುತ್ತಿದ್ದ 44 ಡಿ ನಂಬರಿನ ಖಾಸಗಿ ಬಸ್ಸಿನಲ್ಲಿ ಯಶರಾಜ್(16) ಎಂಬ ವಿದ್ಯಾರ್ಥಿ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದನು.

ಬಸ್​​ನಲ್ಲಿ ಪ್ರಯಾಣಿಕರು ಹೆಚ್ಚಿದ್ದರಿಂದ ಬಸ್​​​​​ ಮುಂಭಾಗದ ಮೆಟ್ಟಿಲಿನಲ್ಲಿ ವಿದ್ಯಾರ್ಥಿ ಯಶರಾಜ್ ನೇತಾಡುತ್ತಿದ್ದ. ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ಈತ ಬಸ್ ನಿಂದ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಈತನನ್ನು ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದ. ಸೆ 13ರಂದು ವಿದ್ಯಾರ್ಥಿ ಮೃತಪಟ್ಟಿದ್ದು, ಮೆದುಳು ನಿಷ್ಕ್ರಿಯವಾಗಿದ್ದರಿಂದ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದರು.

ಬಸ್​ ಚಾಲಕನ ಅತಿಧಾವಂತ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ವಿದ್ಯಾರ್ಥಿ ಹೊರಕ್ಕೆಸೆಯಲ್ಪಟ್ಟಿರುವ ಬಗ್ಗೆ ಮೃತ ಹುಡುಗನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!