ಅಪರಾಧ ನಡೆದಿಲ್ಲ ಎಂದರೆ ಯಾಕೆ ರೇವಣ್ಣ ಅರ್ಜಿ ತಿರಸ್ಕಾರವಾಗಿದೆ?: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರೇವಣ್ಣ ಮೇಲೆ ಏನು ಕೇಸ್ ಇಲ್ಲ ಎಂದರೆ ಯಾಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು? ಅಪರಾಧ ನಡೆದಿಲ್ಲ ಎಂದರೆ ಯಾಕೆ ಆ ಅರ್ಜಿ ತಿರಸ್ಕಾರವಾಗಿದೆ? ಇದರಲ್ಲಿ ರಾಜಕೀಯ ಎಲ್ಲಿ ಬಂತು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣ ಬಂಧನ ರಾಜಕೀಯ ಷ್ಯಡ್ಯಂತ್ರ ಎಂಬ ಆರೋಪಕ್ಕೆ ಅವರು ತಿರುಗೇಟು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣವನ್ನು ಎಸ್‍ಐಟಿ (SIT) ತನಿಖೆ ಮಾಡುತ್ತಿದೆ. ನಮ್ಮ ಪೊಲಿಸರ ಬಗ್ಗೆ ನಂಬಿಕೆ ಇದೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ವರದಿ ಕೊಡುತ್ತಾರೆ ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹೇಳುತ್ತಿವೆ. ಅವರ ಆಡಳಿತದಲ್ಲಿ ಒಂದೇ ಒಂದು ಕೇಸ್‍ನ್ನು ಸಿಬಿಐಗೆ ಕೊಡಲಿಲ್ಲ. ಬಿಜೆಪಿಯವರು ಸಿಬಿಐನ್ನು ಕರಪ್ಷನ್ ಬ್ಯೂರೋ ಆಫ್ ಇನ್ವೇಸ್ಟಿಗೇಶನ್ ಎನ್ನುತ್ತಿದ್ದರು. ಇನ್ನೂ ದೇವೇಗೌಡರು ಚೋರ್ ಬಚಾವ್ ಸಂಸ್ಥೆ ಎಂದಿದ್ದರು. ಈಗ ನೋಡಿದ್ರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಇದರ ಅರ್ಥ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತದೆ ಎಂಬ ನಂಬಿಕೆ ನನಗಿದೆ. ನಾನು ಎಂದೂ ಪೊಲೀಸರಿಗೆ ಕಾನೂನಿನ ವಿರುದ್ಧವಾಗಿ ತನಿಖೆ ಮಾಡಿ ಎಂದು ಹೇಳುವುದಿಲ್ಲ. ಎಸ್‍ಐಟಿ ಮೇಲೆ ನಂಬಿಕೆ ಇಡಬೇಕು. ಈ ಹಿಂದೆ ಸಿಬಿಐಗೆ ನಾವೇ ಲಾಟರಿ ಕೇಸ್, ಜಾರ್ಜ್ ಕೇಸ್, ಹಾಗೂ ಡಿ.ಕೆ ರವಿ ಕೇಸ್ ಕೊಟ್ಟಿದ್ದೇವು. ಆ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯಾ? ಹಾಗೆಂದು ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂಬ ಅರ್ಥ ಅಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!