ಹೊಸದಿಗಂತ, ವರದಿ, ಹಾವೇರಿ:
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿಸಲು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾಡಳಿತ ಒಂದು ರಥದ ಎರಡು ಚಕ್ರವಿದ್ದಂತೆ. ಎಲ್ಲರೂ ಒಟ್ಟಾಗಿ ಯಶಸ್ವಿಯಾಗಿ ಸಮ್ಮೇಳನ ನಡೆಸೋಣ ಎಂದು ಡಾ.ಮಹೇಶ ಜೋಶಿ ಅವರು ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಸಮ್ಮೇಳನದ ವಿವಿಧ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ.
ಸಮಿತಿವಾರು ಈಗಾಗಲೇ ಅನುದಾನವನ್ನು ಹಂಚಿಕೆ ಮಾಡಿದೆ. ಉಪ ಸಮಿತಿಗಳ ಸಭೆ ಕರೆದು ಕಾರ್ಯಕ್ರಮಗಳನ್ನು ಅಂತಿಮಗೊಳಿಸಿ ಮಂಗಳವಾರ ಸಂಜೆಯೊಳಗಾಗಿ ಮಾಹಿತಿ ನೀಡಿ. ವಿವಿಧ ಸಮಿತಿಗಳಲ್ಲಿ ಕಾರ್ಯಕ್ರಮ ಪುನಾರ್ವತೆಯಾಗದಂತೆ ಚರ್ಚಿಸಿ ಕ್ರಮವಹಿಸಬೇಕು. ಪ್ರತಿ ಸಮಿತಿಯಲ್ಲೂ ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳನ್ನು ನಿಯೋಜಿಸಿ ಕಾರ್ಯಕ್ರಮ ಅಂತಿಮಗೊಳಿಸುವಂತೆ ಸಲಹೆ ನೀಡಿದರು.
ವಸತಿ, ಸಾರಿಗೆ, ಪ್ರಚಾರ, ಅಲಂಕಾರ, ಸ್ವಚ್ಛತೆ, ನೋಂದಣಿ ಸೇರಿದಂತೆ ವಿವಿಧ ೨೪ ಸಮಿತಿಗಳು ಸಲ್ಲಿಸಿದ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಂಡು ಸಮ್ಮೇಳನದ ಎಲ್ಲ ಕೆಲಸಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕಾಲಕಾಲಕ್ಕೆ ಸಮನ್ವಯ ಸಮಿತಿ ಗಮನಕ್ಕೆ ಲಿಖಿತವಾಗಿ ತರಬೇಕು ಎಂದು ಸೂಚನೆ ನೀಡಿದರು.
ಮಠಾಧೀಶರ ಸಭೆ
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಶೀಘ್ರವೇ ಜಿಲ್ಲಾಡಳಿತದಿಂದ ವಿವಿಧ ಮಠಾಧೀಶರನ್ನು ಆಹ್ವಾನಿಸಿ, ಸಭೆ ನಡೆಸಲಾಗವುದು. ಶೀಘ್ರವೇ ದಿನಾಂಕ ನಿಗಧಿಪಡಿಸಿ ಆಹ್ವಾನಿಸಲಾಗುವುದು. ಸಮ್ಮೇಳನದಲ್ಲಿ ಮಠಾಧೀಶರು ಸೇರಿದಂತೆ ಎಲ್ಲರೂ ಸಕ್ರೀಯವಾಗಿ ಭಾಗವಹಿಸಲು ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದರು.