ಹೊಸದಿಗಂತ ವರದಿ ಮಂಡ್ಯ :
ಕಾಂಗ್ರೆಸ್ಸಿಗರು ಪೇ ಸಿಎಂ ಆಂದೋಲನ ಹಮ್ಮಿಕೊಂಡು ರಾಜ್ಯಾದ್ಯಂತ ಬಿಜೆಪಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಕಾರ್ಯ ನಡೆಸುತ್ತಿದ್ದರೆ, ಇತ್ತ ಮಂಡ್ಯದಲ್ಲಿ ರೈತರು ಪೇ ಫಾರ್ಮರ್ ಅಭಿಯಾನ ಪ್ರಾರಂಭಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಸರಬರಾಜು ಮಾಡುವ ಪ್ರತಿ ಟನ್ ಕಬ್ಬಿಗೆ 4500 ರೂ. ನೀಡಬೇಕು ಎಂದು ಒತ್ತಾಯಿಸಿ ಪೇ ಫಾರ್ಮರ್ ಅಭಿಯಾನ ಎಲ್ಲೆಡೆ ಜೋರಾಗಿದೆ.
ಈಗಾಗಲೇ ರೈತರು ಸರ್ಕಾರ, ಸಂಬಂಧಿಸಿದ ಸಚಿವರು, ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಮನವಿ ಸಲ್ಲಿಸಿ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ಗೆ 4500 ರೂ. ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಹೋರಾಟವನ್ನು ತೀವ್ರಗೊಳಿಸಿದ್ದರು. ಆದರೂ ಸರ್ಕಾರ ಮಾತ್ರ ಇತ್ತ ಕಿವಿಗೊಡಲಿಲ್ಲ. ಇದೀಗ ಪೇ ಫಾರ್ಮರ್ ಎಂಬ ಅಭಿಯಾನಕ್ಕೆ ರೈತ ಸಂಘ ನಾಂದಿ ಹಾಡಿದೆ.
4500 ರೂ. ಪರ್ ಟನ್ ಫಾರ್ ಶುಗರ್ಕೇನ್ ಎಂಬ ಘೋಷವಾಕ್ಯದೊಂದಿಗೆ ಪೇಟಿಎಂ ಚಿಹ್ನೆ ಬಳಸಿ ಅದಕ್ಕೆ ರೈತನ ಚಿತ್ರವನ್ನು ಕ್ಯೂಆರ್ ಕೋಡ್ ಮೂಲಕ ಸೃಷ್ಠಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಇನ್ನಾದರೂ ಆಳುವ ಸರ್ಕಾರಗಳು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂಬುದು ರೈತ ಮುಖಂಡರ ಒತ್ತಾಯವಾಗಿದೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.