ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ ಆಶ್ವಾಸನೆಗಳು ವಿಫಲವಾಗಿದ್ದು, ಜನರು ನರೇಂದ್ರ ಮೋದಿಯವರ ಆಶ್ವಾಸನೆಗಳನ್ನೇ ನಂಬಿದ್ದಾರೆ. ಹಾಗಾಗಿ ರಾಜ್ಯದ ಜನತೆ ನರೇಂದ್ರ ಮೋದಿ ಪರ ಇದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಬಿಜೆಪಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಮುಂಬೈನ ಬಹಳ ದೊಡ್ಡ ಸಂಪರ್ಕ ಕಲ್ಪಿಸುವ ದೊಡ್ಡ ಸೇತುವೆಯಾಗಿದೆ. ಬಿಜೆಪಿಯ ಬೆಳವಣಿಗೆಗಾಗಿ ಮಂಗಳೂರಿನ ಅನೇಕರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. 2024ರ ಚುನಾವಣೆ ಹೊಸ ಇತಿಹಾಸ ನಿರ್ಮಿಸುವ ಚುನಾವಣೆಯಾಗಿದೆ ಎಂದರು.
ಪ್ರತಿ ಐದು ವರ್ಷಗಳಿಗೊಮ್ಮೆ ನಾವು ಸರ್ಕಾರವನ್ನು ಆಯ್ಕೆ ಮಾಡುತ್ತೇವೆ. ಆದರೆ, ಪ್ರಧಾನಿ ಮೋದಿ 10 ವರ್ಷಗಳಲ್ಲಿ 100 ವರ್ಷಗಳ ಕೆಲಸವನ್ನು ಮಾಡಿದ್ದಾರೆ. ಮೋದಿಯವರ ಗ್ಯಾರಂಟಿ ಕಾಂಗ್ರೆಸ್ ಗ್ಯಾರಂಟಿ ಅಲ್ಲ. ಕಾಂಗ್ರೆಸ್ ನೀಡಿದ ಯಾವುದೇ ಆಶ್ವಾಸನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಸರ್ಕಾರ ಜನರನ್ನು ವಂಚಿಸಲು ಬಂದಿದೆ ಎಂದಿದ್ದಾರೆ.