ಹೊಸದಿಗಂತ ವರದಿ ಬೆಳಗಾವಿ:
ಪಶ್ಚಿಮಘಟ್ಟ ಪ್ರದೇಶ ಹಾಗೂ ತಿಲಾರಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಕುಂದಾನಗರಿ ಬೆಳಗಾವಿ ನಗರದ ಪ್ರಮುಖ ಕುಡಿಯುವ ನೀರಿನ ಆಸರೆಯಾಗಿರುವ ರಾಕ್ಷಸಕೊಪ್ಪ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದೆ.
ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅರ್ಧ ಟಿಎಂಸಿ ಸಾಮರ್ಥ್ಯದ ಈ ಜಲಾಶಯವು ಪೂರ್ಣ ಮಟ್ಟ ತಲುಪಿದ್ದು, ನದಿಗೆ ಹೆಚ್ಚುವರಿ ನೀರನ್ನು ಹರಿಬಿಡಲಾಗುತ್ತಿದೆ.
ಜಲಾಶಯ ಭರ್ತಿಯಾಗಿರುವುದರಿಂದ ಇತ್ತೀಚೆಗೆ ಕುಡಿಯುವ ನೀರಿನ ಅಭಾವದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಬೆಳಗಾವಿ ಮಹಾನಗರದ ಜನತೆಗೆ ಇದೀಗ ನಿರಾಳತೆಯ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ಒಂದು ವರ್ಷದವರೆಗೆ ನಗರಕ್ಕೆ ಯಾವುದೇ ರೀತಿಯ ನೀರಿನ ಅಭಾವ ಎದುರಾಗುವುದಿಲ್ಲ ಎಂದು ನೀರಾವರಿ ಹಾಗೂ ಪಾಲಿಕೆ ಮೂಲಗಳು ಅಂದಾಜಿಸಿವೆ.



