ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅದ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.
ಬಳಿಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸರ್ವೋದಯ ಸಮಾವೇಶದಲ್ಲಿ ಸನ್ಮಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಖರ್ಗೆ, ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಕೆಲಸ ಮಾಡಬೇಕು. ಹಣದ ಆಸೆಗಾಗಿ ಯಾವತ್ತೂ ಕೆಲಸ ಮಾಡಬಾರದು. ಪಕ್ಷ ಸಿದ್ಧಾಂತ ನಂಬಿದವರು ಎಂದಿಗೂ ಪಕ್ಷ ಬಿಡುವ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಾ, 70 ವರ್ಷದ ಆಡಳಿತದಲ್ಲಿ ಏನು ಮಾಡಿದ್ರಿ ಎಂದು ಕೇಳುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ಬುನಾದಿ ಹಾಕಿ ಕೊಡುವ ಕೆಲಸ ಮಾಡಿದೆ. ಒಂದು ವೇಳೆ ನಾವು ಏನೂ ಮಾಡದೇ ಹೋಗಿದ್ದರೆ ದೇಶ ಉಳಿಯುತ್ತಿರಲಿಲ್ಲ ಎಂದರು.
ಅಂಬೇಡ್ಕರ್ ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಸಂವಿಧಾನದ ಕಾರಣದಿಂದ ಮೋದಿ, ಅಮಿತ್ ಶಾ ಮಾತನಾಡುತ್ತಿದ್ದಾರೆ. ದೇಶದಲ್ಲಿ ಕೆಟ್ಟ ಸರ್ಕಾರ ಆಡಳಿತದಲ್ಲಿದೆ. ಜನರೆಲ್ಲಾ ಒಗ್ಗೂಡಿ ಹೋರಾಟ ಮಾಡಬೇಕಿದೆ. ಆಗ ಮಾತ್ರ ಕೆಟ್ಟ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯ ಎಂದು ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆ ಆಕ್ರೋಶ ಹೊರ ಹಾಕಿದರು.
ಇಂದಿರಾಗಾಂಧಿ ಹೋರಾಟ ಮಾಡದೇ ಹೋಗಿದ್ದರೆ ಬಾಂಗ್ಲಾದೇಶ ಇರುತ್ತಿರಲಿಲ್ಲ. ವಿದೇಶಾಂಗ ನೀತಿಯನ್ನು ನೆಹರು ಮಾಡಿದರು. ಕಾರಣವಿಲ್ಲದೆ ಪದೇ ಪದೇ ನೆಹರು, ಇಂದಿರಾಗಾಂಧಿ, ಸೋನಿಯಾಗಾಂಧಿ ಅವರನ್ನು ಬೈಯ್ಯುವುದು ಬಿಡಿ ಎಂದು ಹೇಳಿದರು.