ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಹೈಕೋರ್ಟ್ ಅವಿವಾಹಿತ ಮಹಿಳೆಯರ ಮಕ್ಕಳ ಪಾಲಿಗೆ ಮಹತ್ವದ ತೀರ್ಪು ನೀಡಿದೆ. ಗುರುತಿನ ದಾಖಲೆಗಳಲ್ಲಿ ತಂದೆಯ ಹೆಸರು ಕಡ್ಡಾಯವೇನಲ್ಲ, ತಾಯಿಯ ಹೆಸರಿದ್ದರೆ ಸಾಕು ಎಂಬ ಆದೇಶವನ್ನು ನೀಡಿದೆ. ಈ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ.ವಿ.ಕುಂನ್ಞಿಕೃಷ್ಣನ್ ಮಹಾಭಾರತದ ‘ಕರ್ಣ’ ನೋವಿನ ವೃತ್ತಾಂತವನ್ನು ವಿವರಿಸಿದರು. ಇನ್ನು ಮುಂದೆ ಕರ್ಣನಂತೆ ನೋವು ಅನುಭವಿಸುವ ಅವಮಾನ ಯಾರಿಗೂ ಬೇಡ. ‘ಮಹಾಭಾರತದ ಕರ್ಣನಂತೆ ತನ್ನ ಹೆತ್ತವರು ಯಾರೆಂದು ತಿಳಿಯದೆ ಜೀವನ ಪರ್ಯಂತ ಅಪಹಾಸ್ಯಕ್ಕೊಳಗಾದವನು ನಮ್ಮ ಸಮಾಜದಲ್ಲಿ ಯಾರೂ ಇರಬಾರದು ಎಂದು ನಾವು ಬಯಸುತ್ತೇವೆ.
ಅವಿವಾಹಿತ ಮಹಿಳೆಯರು ಮತ್ತು ಅತ್ಯಾಚಾರ ಸಂತ್ರಸ್ತರ ಮಕ್ಕಳ ನೋವುಗಳನ್ನು ಗುರುತಿಸಿ ಈ ತೀರ್ಪು ನೀಡಲಾಗಿದೆ. ಜನನ ಪ್ರಮಾಣಪತ್ರದಿಂದ ತಂದೆಯ ಹೆಸರನ್ನು ಅಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ.ವಿ.ಕುಂನ್ಞಿಕೃಷ್ಣನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಯಿಯ ಹೆಸರನ್ನಷ್ಟೇ ನಮೂದಿಸಿ ಗುರುತಿನ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅವಿವಾಹಿತ ಹೆಣ್ಣುಮಕ್ಕಳಿಗೆ ಹುಟ್ಟಿದವರು ಅವಳ ಮಕ್ಕಳಷ್ಟೇ ಅಲ್ಲ ಈ ಭವ್ಯ ಭಾರತ ದೇಶದ ಮಕ್ಕಳೂ ಹೌದು..ಅವರೂ ಈ ದೇಶದ ಪ್ರಜೆಗಳು ಎಂದು ಸ್ಪಷ್ಟಪಡಿಸಿದರು. ಭಾರತ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಅವರ ಖಾಸಗಿತನ, ಘನತೆ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾಗಿದೆ.