ಹೊಸದಿಗಂತ ವರದಿ ಹುಬ್ಬಳ್ಳಿ:
ಆದಿ ಬಣಜಿಗ ಸಮಾಜದ ವತಿಯಿಂದ ಹುಬ್ಬಳ್ಳಿಯ ಉಣಕಲ್ ನ ಹಳೇ ಪಿ.ಬಿ.ರಸ್ತೆ ಸಿದ್ದೇಶ್ವರ ಕೈಲಾಸ ಮಂಟಪದಲ್ಲಿ ಗುರುವಾರ ಆದಿ ಬಣಜಿಗ ಸಮಾಜವನ್ನು ೨ಡಿ ಮೀಸಲಾತಿ ಸೇರ್ಪಡಿಸಿದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದಿನ ಸರ್ಕಾರ ಮತ ಬ್ಯಾಂಕ್ಗಾಗಿ ಹಾಗೂ ರಾಜಕೀಯ ಲಾಭಕ್ಕಾಗಿ ಈ ಸಮಾಜವನ್ನು ಬಳಸಿಕೊಳ್ಳುತ್ತಿದ್ದವು. ಆದರೆ ನಮ್ಮ ಸರ್ಕಾರ ಅವರ ಬೇಡಿಕೆ ಈಡೇರಿಸಿದೆ ಎಂದರು.
ಆದಿ ಬಣಜಿಗ ಸಮಾಜ ನೀಡಿದಂತ ಮೀಸಲಾತಿ ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದ ಯುವಕರು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಪಡೆದುಕೊಳ್ಳಬೇಕು. ಸಮಾಜದ ಜನ ಒಗ್ಗಟ್ಟಿನಿಂದಿರಬೇಕು. ವ್ಯಕ್ತಿ ಶಾಶ್ವತ ಅಲ್ಲ ಸಂಸ್ಥೆ ಶಾಶ್ವತವಾಗಿದೆ. ಆದರಿಂದ ಸಂಸ್ಥೆ ನಿರ್ಮಾಣ ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಆದಿ ಬಣಜಿಗ ಸಮಾದ ವತಿಯಿಂದ ಸನ್ಮಾನಿಸಲಾಯಿತು.