ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಮಧ್ಯಾಹ್ನ ಅಗಲಿದ ರಾ. ಸ್ವ. ಸಂಘದ ಜ್ಯೇಷ್ಠ ಪ್ರಚಾರಕರಾದ ಚಂದ್ರಶೇಖರ ಭಂಡಾರಿ (87) ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಬೆಳಗ್ಗೆ ಕೇಶವಕೃಪದಲ್ಲಿ ಹಲವು ಗಣ್ಯರು, ಮೃತರ ಒಡನಾಡಿಗಳು ಅಂತಿಮ ನಮನ ಸಲ್ಲಿಸಿದರು.
1935ರ ಮೇ 4ರಂದು ಜನಿಸಿದ ಚಂದ್ರಶೇಖರ ಭಂಡಾರಿ ಅವರು ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ಬಿಎಡ್ ಪದವೀಧರರಾಗಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದ ಚಂದ್ರಶೇಖರರು ಸಂಘದ ಪ್ರಚಾರಕರಾಗಿದ್ದು 1961ರಲ್ಲಿ. ಆನಂತರದ ದಿನಗಳಲ್ಲಿ ಅವರದ್ದು ದಣಿವರಿಯದ ಸಂಘಟನಾತ್ಮಕ ಸೇವೆ. ಅವರ ಮೃದುಮಾತು, ಎಲ್ಲರನ್ನೂ ಅಕ್ಕರೆಯಿಂದ ಮಾತನಾಡಿಸಿ ಸಂಘಟಿಸುವ ಗುಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಲ್ಲಿರುವ ಹಿರಿ-ಕಿರಿಯರಾದಿಯಾಗಿ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.
1983ರಲ್ಲಿ ಹೊ ವೆ ಶೇಷಾದ್ರಿ ಅವರ ಪ್ರೇರಣೆಯಿಂದ ಸಾಹಿತ್ಯ ಸೃಷ್ಟಿಗೆ ತೊಡಗಿದರು. ಅಲ್ಲಿಂದ ಶುರುವಾಗಿ ಅನೇಕ ಜನಮನ್ನಣೆಯ ಕೃತಿಗಳನ್ನು ಹೊರತಂದರು. ‘ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು…’ ಹಾಡಂತೂ ಲಕ್ಷಾಂತರ ಕಂಠಗಳಲ್ಲಿ ನಲಿದಾಡಿದೆ.
ಸಾಮಾಜಿಕ ಕಾರ್ಯಕರ್ತ ದತ್ತೋಪಂಥ ಠೇಂಗಡಿ ಅವರು ಅಂಬೇಡ್ಕರರ ಕುರಿತು ಮರಾಠಿಯಲ್ಲಿ ಬರೆದಿದ್ದ ಕೃತಿಯನ್ನು ಕನ್ನಡದಲ್ಲಿ ‘ಸಾಮಾಜಿಕ ಕ್ರಾಂತಿಸೂರ್ಯ ಡಾ ಬಾಬಾ ಸಾಹೇಬ್ ಅಂಬೇಡ್ಕರ್’ ಎಂದು ಅನುವಾದಿಸಿದ ಚಂದ್ರಶೇಖರ ಭಂಡಾರಿಯವರ ಕಾರ್ಯ, ವೈಚಾರಿಕ ಸಾಹಿತ್ಯಕ್ಕೊಂದು ಬಲುದೊಡ್ಡ ಕೊಡುಗೆ
ಸಂಘಟನೆ-ಸಾಹಿತ್ಯಸೃಷ್ಟಿಗಳಲ್ಲಿ ದಣಿವರಿಯದೇ ಕೆಲಸ ಮಾಡಿದ ಜೀವವೊಂದು ಚಿರವಿಶ್ರಾಮಕ್ಕೆ ತೆರಳಿದೆ.