ಹೊಸದಿಗಂತ ವರದಿ, ಮೈಸೂರು:
ಮೈಸೂರಿನ ಶ್ರೀರಾಮಪುರ 2ನೇ ಹಂತದಲ್ಲಿರುವ ಕೆ.ಆರ್.ಆಸ್ಪತ್ರೆಯ ಮಕ್ಕಳ ವೈದ್ಯ ದಂಪತಿಯ ಪುತ್ರ ಅಭಿಜಿತ್ನನ್ನು ಅಪಹರಣ ಮಾಡಿದ್ದ ಐವರು ಆರೋಪಿಗಳನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.
ಸನು (23), ಕಿರಣ್ (20), ನಿತಿನ್ (21), ನಿಶಾಂತ್ (21) ಚೇತನ್ (22) ಬಂಧಿತರು.
ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಬಂಧಿತ ಐವರು ಆರೋಪಿಗಳು ಕಾರಿನಲ್ಲಿ ವೈದ್ಯ ದಂಪತಿಯ 12 ವರ್ಷದ ಮಗನನ್ನ ಅಪಹರಿಸಿದ್ದರು. ಸ್ಥಳೀಯರಿಂದ ಅಪಹರಣದ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ರಾತ್ರಿ 7 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದು ಆರೋಪಿಗಳು ಬಾಲಕನನ್ನ ಕಿಡ್ನಾಪ್ ಮಾಡಿದ್ದರು. ಬಾಲಕನ ರಕ್ಷಣೆಗಾಗಿ ಹಲವು ತಂಡಗಳನ್ನು ರಚನೆ ಮಾಡಲಾಗಿತ್ತು. ಹಲವು ಗಂಟೆಗಳ ಕಾರ್ಯಾಚರಣೆ ನಂತರ ಬಾಲಕನನ್ನ ರಕ್ಷಣೆ ಮಾಡಲಾಯಿತು. ಅದಾದ ಕೆಲವು ಗಂಟೆಗಳಲ್ಲಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದೇವೆ ಎಂದರು.
ಆರೋಪಿಗಳು ಗ್ರಾಮಾಂತರ ನಗರ ಭಾಗದವರು. ಅದರಲ್ಲಿ ಒಬ್ಬ ಮಂಗಳೂರಿನವನಾಗಿದ್ದಾನೆ. ಐವರು ಆರೋಪಿಗಳು ಹಲವು ದಿನಗಳಿಂದ ಅಪಹರಣಕ್ಕೆ ಸ್ಕೆಚ್ ಹಾಕಿದ್ದರು. ಪ್ರಮುಖ ಆರೋಪಿ ಬಾಲಕನ ತಾತನ ಆರೈಕೆ ಮಾಡುತ್ತಿದ್ದ. ಮನೆಯಲ್ಲೇ ಅವರ ತಾತನನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಇಬ್ಬರು ಚಾಲಕರು , ಮತ್ತಿಬ್ಬರು ಡೇ ಕೇರ್ ನಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬನಿಗೆ ಏನು ಕೆಲಸ ಇರಲಿಲ್ಲ. ಸಾಲ ಮಾಡಿ ಹಣದ ಅವಶ್ಯಕತೆಗಾಗಿ ಅಪಹರಣ ಮಾಡಿದ್ದು, ನಂತರ ಬಾಲಕನನ್ನು ಅವರೇ ಬಿಟ್ಟು ಹೋಗುವಂತೆ ಮಾಡಲಾಯಿತು.
ಅಪಹರಣ ಮಾಡಿದವರು ಒಬ್ಬರಿಗೊಬ್ಬರು ಪರಿಚಯದವರಾಗಿದ್ದರು. ಬಾಲಕನನ್ನು ಬಿಟ್ಟು ಹೋದ 12 ಗಂಟೆಯ ಒಳಗೆ ಆರೋಪಿಗಳನ್ನ ವಿರಾಜಪೇಟೆಯಲ್ಲಿ ಬಂಧಿಸಲಾಗಿದೆ. ಅಪಹರಣಕ್ಕಾಗಿ ಎರಡು ಕಾರನ್ನು ಬಳಸಲಾಗಿತ್ತು. 2 ಕಾರು, 5 ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ. ಬಾಲಕನಿಗೆ ಯಾವುದೇ ಹಲ್ಲೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.