ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣ ಪಕ್ಷವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಈ ವರ್ಷ ಪಿತೃ ಪಕ್ಷ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 25 ರವರೆಗೆ ಇರಲಿದೆ. ಈ ಸಮಯದಲ್ಲಿ ಗೃಹಪ್ರವೇಶ, ಮದುವೆ, ವಾಹನ ಖರೀದಿ ಮುಂತಾದ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಇದೇ ವೇಳೆ ಜಾತಕದಲ್ಲಿ ಪಿತೃ ದೋಷವೇನಾದರೂ ಇದ್ದರೆ ಅದನ್ನು ನಿವಾರಿಸಲು ಸೂಕ್ತ ಸಮಯವೆಂದು ಹೇಳಲಾಗುತ್ತದೆ. ಈ ಹದಿನಾರು ದಿನಗಳ ಪಿತೃ ಹಬ್ಬದಂದು ನಮ್ಮ ಹಿರಿಯರ ಮತ್ತು ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಕೆಲವು ರೀತಿಯ ಪೂಜೆಗಳನ್ನು ಮಾಡಲಾಗುತ್ತದೆ. ಪೂರ್ವಜರ ಆತ್ಮ ಸಂತೃಪ್ತಿಗಾಗಿ ಶ್ರಾದ್ಧ ಮತ್ತು ತರ್ಪಣ ದಿನದಂದು ದಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತದೆ ಎಂಬುದು ನಂಬಿಕೆ
ದಾನ ಮಾಡಬೇಕಾದ ವಸ್ತುಗಳ ಮಹತ್ವ ತಿಳಿಯೋಣ
ಕಪ್ಪು ಎಳ್ಳು: ಕಪ್ಪು ಎಳ್ಳನ್ನು ಪುಣ್ಯಪೂರ್ವಕವಾಗಿ ದಾನ ಮಾಡುವುದರಿಂದ ನಮ್ಮ ಪೂರ್ವಜರು ಮತ್ತು ದಾನಿಗಳಿಬ್ಬರೂ ಫಲವನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ನೀವು ಇತರ ವಸ್ತುಗಳನ್ನು ದಾನ ಮಾಡಲು ಸಾಧ್ಯವಾಗದಿದ್ದರೂ, ಕಪ್ಪು ಎಳ್ಳನ್ನು ದಾನ ಮಾಡಿದರೆ ಶ್ರೇಯಸ್ಕರ ಎನ್ನಲಾಗಿದೆ. ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ತೊಂದರೆಗಳು ಮತ್ತು ವಿಪತ್ತುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.
ವಸ್ತ್ರ: ಪಿತೃಕಾರ್ಯಗಳನ್ನು ಮಾಡುವ ಸಮಯದಲ್ಲಿ ವಸ್ತ್ರಗಳನ್ನು ದಾನ ಮಾಡುವುದು ಉತ್ತಮ. ಶ್ರಾದ್ಧದ ದಿನದಂದು ಧೋತಿ ಮತ್ತು ಸೀರೆ ದಾನ ಮಾಡುವುದು ಲಾಭದಾಯಕ. ಗರುಡ ಪುರಾಣದ ಪ್ರಕಾರ, ನಮ್ಮಂತೆಯೇ, ನಮ್ಮ ಪೂರ್ವಜರ ಆತ್ಮವು ಋತುಗಳ ಬದಲಾವಣೆಯಿಂದ ಪ್ರಭಾವಿತವಾಗಿರುತ್ತದೆ. ಅವರಿಗೂ ಕೂಡ ಚಳಿ ಮತ್ತು ಶಾಖವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಅವರು ತಮ್ಮ ವಾರಸುದಾರರು ಬಟ್ಟೆ ಕೊಡಲಿ ಎಂದು ಬಯಸುತ್ತಾರೆ ಎಂದು ಉಲ್ಲೇಖವಿದೆ.
ಬೆಲ್ಲ ಮತ್ತು ಉಪ್ಪು: ಶ್ರಾದ್ಧದ ಸಮಯದಲ್ಲಿ ಬೆಲ್ಲ ಮತ್ತು ಉಪ್ಪನ್ನು ದಾನ ಮಾಡುವುದರಿಂದ ನಮ್ಮ ಪೂರ್ವಜರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಉಪ್ಪನ್ನು ದಾನ ಮಾಡುವುದರಿಂದ ಸಾವಿನ ಭಯವೂ ದೂರವಾಗುತ್ತದೆ.
ಪಾದರಕ್ಷೆ: ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಚಪ್ಪಲಿ (ಪಾದರಕ್ಷೆ) ದಾನ ಮಾಡಬೇಕು. ಇವುಗಳನ್ನು ಧರಿಸುವುದರಿಂದ ನಮ್ಮ ಪೂರ್ವಜರು ಸುಖವಾಗಿರುತ್ತಾರೆ ಎಂಬ ನಂಬಿಕೆ ಇದೆ.
ಛತ್ರಿ: ಶ್ರಾದ್ಧದ ಸಮಯದಲ್ಲಿ ಕೊಡೆ ದಾನ ಮಾಡುವುದು ಶ್ರೇಯಸ್ಕರ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಪೂರ್ವಜರ ಆತ್ಮಗಳು ಸಮಾಧಾನಗೊಳ್ಳುತ್ತವೆ.
ಬೆಳ್ಳಿ ವಸ್ತುಗಳು: ಬೆಳ್ಳಿ ಲೋಹದಿಂದ ಮಾಡಿದ ಯಾವುದೇ ವಸ್ತುವನ್ನು ದಾನ ಮಾಡುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಮತ್ತು ಅವರ ಆಶೀರ್ವಾದ ಸಿಗುತ್ತದೆ. ಬೆಳ್ಳಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಆದುದರಿಂದಲೇ ಶ್ರಾದ್ಧದಲ್ಲಿ ಪೂರ್ವಜರನ್ನು ಒಲಿಸಿಕೊಳ್ಳಲು ಬೆಳ್ಳಿ, ಅಕ್ಕಿ, ಹಲಸನ್ನು ದಾನ ಮಾಡುತ್ತಾರೆ.
ಭೂಮಿ: ಪೂರ್ವಜರ ಶಾಂತಿಗಾಗಿ ಭೂಮಿಯನ್ನು ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಹಿರಿಯರ ಮನಃಶಾಂತಿಗಾಗಿ ಭೂಮಿ ದಾನ ಅತ್ಯುತ್ತಮ ಕೊಡುಗೆ. ಆದರೆ ಇಂದಿನ ಕಾಲದಲ್ಲಿ ಅದು ಅಸಾಧ್ಯ.