ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಹಣಕಾಸು ನೆರವು ಒದಗಿಸಿದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಮೂವರನ್ನು ಹಿನ್ನೆಲೆಯಲ್ಲಿ ಎನ್ ಐ ಎ ತಂಡ ಅಧಿಕೃತವಾಗಿ ಬಂಧಿಸಿದೆ.
ಬಂಧಿತರನ್ನು
ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಜ್ ನವಾಜ್ ಎಂದು ಗುರುತಿಸಲಾಗಿದೆ. ತನಿಖಾ ನಿಯಮದಂತೆ ನಿನ್ನೆಯಿಂದ ಇಂದಿನವರೆಗೂ ತೀವ್ರ ವಿಚಾರಣೆ ನಡೆಸಿ, ಇಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮೂವರನ್ನು ಬಿಹಾರದ ಪಾಟ್ನಾಕ್ಕೆ ಹೆಚ್ಚಿನ ತನಿಖೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಸಂಜೆಯಿಂದ ತಡ ರಾತ್ರಿ ವರೆಗೆ ಬಂಟ್ವಾಳ ತಾಲೂಕಿನ ನಂದಾವರ ಪಾಣೆಮಂಗಳೂರು, ಮೆಲ್ಕಾರ್ ಪರಿಸರದ ನಾಲ್ಕು ಮನೆಗಳು ಹಾಗೂ ಎರಡು ಆನ್ ಲೈನ್ ಸೇವಾ ಕೇಂದ್ರಗಳಿಗೆ ದಾಳಿನಡೆಸಿ, ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸಿತ್ತು.
ಈ ಮೂವರು ಯುವಕರು ಬ್ಯಾಂಕ್ ಖಾತೆ ಮೂಲಕ ಫಂಡಿಂಗ್ ಮಾಡಿರುವ ಕುರಿತಾಗಿ ಪ್ರಾಥಮಿಕ ಹಂತದ ತನಿಖೆಯಲ್ಲಿ ಸಾಕ್ಷ್ಯಗಳು ದೊರೆತಿರುವ ಹಿನ್ನೆಲೆಯಲ್ಲಿ ಎನ್ ಐ ಎ ಈ ಕ್ರಮಕೈಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.