ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿರುವ ಬಡತನ ಒಂದೇ ಏಕೈಕ ಜಾತಿ ಎಂದು ಕರೆಯುವ ಪ್ರಧಾನಿ ಮೋದಿ ತಮ್ಮನ್ನು ತಾವು ಹಿಂದುಳಿದ ವರ್ಗಗಳ (OBC) ಎಂದು ಏಕೆ ಗುರುತಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ .
ಛತ್ತೀಸ್ಗಢದ ಜಗದಲ್ಪುರದಲ್ಲಿ ಸಾರ್ವಜನಿಕ ಸಮಾವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಆದಿವಾಸಿಗಳನ್ನು ವನವಾಸಿ ಎಂದು ಕರೆಯುವ ಮೂಲಕ ಅವಮಾನಿಸಿದೆ.ಆದಿವಾಸಿ ಹಾಗೂ ವನವಾಸಿ ಎಂಬ ಪದಗಳ ನಡುವೆ ಸಾಕಷ್ಟು ವ್ಯತ್ಯಾಸವಿದ್ದು, ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕನೋರ್ವ ಆದಿವಾಸಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಮೇಲೆ ಮೂತ್ರ ವಿಸರ್ಜಿಸಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಇದು ಬಿಜೆಪಿ ಅವರ ಮನಸ್ಥಿತಿ ಹೇಗಿದೆ ಎಂಬುದು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಆದಿವಾಸಿ ಎಂಬುದು ಕ್ರಾಂತಿಕಾರಿ ಪದವಾಗಿದ್ದು, ಈ ದೇಶದ ಮೂಲ ವಾಸಿಗಳು ಎಂದರ್ಥ. ಬಿಜೆಪಿಯವರು ಆದಿವಾಸಿ ಎಂಬ ಪದವನ್ನು ಯಾವುದೇ ಕಾರಣಕ್ಕೂ ಬಳಸುವುದಿಲ್ಲ ಏಕೆಂದರೆ ಒಂದು ವೇಳೆ ಅವರು ಹಾಗೆ ಮಾಡಿದರೆ ಇಲ್ಲಿನ ಭೂಮಿ ಹಾಗೂ ಅರಣ್ಯವನ್ನು ಹಿಂತಿರುಗಿಸಬೇಕಾಗುತ್ತದೆ. ವನವಾಸಿ ಎಂಬ ಪದವು ಆದಿವಾಸಿಗಳಿಗೆ ಮಾಡಿರುವ ಅವಮಾನವಾಗಿದ್ದು, ಇದನ್ನು ಕಾಂಗ್ರೆಸ್ ಸಹಿಸುವ ಮಾತಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ತಮ್ಮ ಭಾಷಣಗಳಲ್ಲಿ ಆದಿವಾಸಿ ಎಂಬ ಪದವನ್ನು ಹೆಚ್ಚಾಗಿ ಬಳಸಿದ್ದರು. ಇನ್ನು ಮುಂದೆ ಅವರು ಹಾಗೆ ಮಾಡುವುದಿಲ್ಲ ಏಕೆಂದರೆ ಅವರು ತಮ್ಮ ಭಾಷಣ ಮಾಡುವ ವೇಳೆ ಮಾತನಾಡುವ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ, ಅವರ ಆಲೋಚನೆಗಳನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.